ನಡ : ಸ್ಟಾರ್ ಲೈನ್ ಆಂಗ್ಲಮಾಧ್ಯಮ ಶಾಲೆ ರಝಾಗಾರ್ಡನ್ ಮಂಜೊಟ್ಟಿ ಇಲ್ಲಿ ಆಗಸ್ಟ್ 5 ರಂದು ಬೆಳ್ತಂಗಡಿ ಮತ್ತು ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ಜರುಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಜನಾಬ್ ಸಯ್ಯದ್ ಹಬೀಬ್ ಇವರು ವಹಿಸಿಕೊಂಡಿದ್ದರು.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ತಾಲೂಕು ನಿಕಟಪೂರ್ವ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ, ಬಂಗಾಡಿ ವಲಯ ಸಂಪನ್ಮೂಲ ವ್ಯಕ್ತಿ ರಮೇಶ್, ವಲಯ ಸಂಘಟಕರಾದ ರವಿ. ಪಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಅಮಿತಾನಂದ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಯ್ಯದ್ ಅಯ್ಯುಬ್, ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಸುಜಯ ಇವರು ವಿದ್ಯಾರ್ಥಿಗಳಿಗೆ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜನಾಬ್ ಸಯ್ಯದ್ ಹಬೀಬ್ ಇವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿಯವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ವಿದ್ಯಾರ್ಥಿಗಳಿಗೆ ಶುಭಾಷಯ ಕೋರಿದರು.
ಶಾಲಾ ಸಹ ಶಿಕ್ಷಕಿ ಶ್ವೇತಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕಿಯರಾದ ಕ್ರಿಶಲಾರವರು ಅತಿಥಿಗಳನ್ನು ಸ್ವಾಗತಿಸಿ, ಸುಶ್ಮಿತಾ ಇವರು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಈ ಪಂದ್ಯಾಟದ ಫಲಿತಾಂಶವಾಗಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ್ಟಾರ್ ಲೈನ್ ಆಂಗ್ಲಮಾಧ್ಯಮ ಶಾಲೆ ಮಂಜೊಟ್ಟಿ ಮತ್ತು ದ್ವಿತೀಯ ಸ್ಥಾನವನ್ನು ಅನುದಾನಿತ ಚರ್ಚ್ ಶಾಲೆ ಬೆಳ್ತಂಗಡಿ ಇಲ್ಲಿಯ ಬಾಲಕರು ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಮತ್ತು ದ್ವಿತೀಯ ಸ್ಥಾನವನ್ನು ಅನುದಾನಿತ ಚರ್ಚ್ ಶಾಲೆ ಬೆಳ್ತಂಗಡಿ ಇವರು ಪಡೆದುಕೊಂಡರು.













