
ಬೆಳ್ತಂಗಡಿ: ಕರಂಬಾರು ಗ್ರಾಮದ ಕೇಳ್ಕರದಿಂದ ಕಲ್ಲಮೆಯಾಗಿ ಮುಂಡೂರನ್ನು ಸಂಪರ್ಕಿಸುವ ರಸ್ತೆ ಪೂರ್ತಿ ಕೆಸರುಮಯವಾಗಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಕಳೆದ 10 ವರ್ಷಗಳಿಂದ ಈ ರಸ್ತೆ ಡಮಾರು ಕಂಡಿಲ್ಲ, ಈ ಭಾಗದಲ್ಲಿ ಸುಮಾರು 40 ಮನೆಗಳಿದ್ದು, ಈ ರಸ್ತೆಯನ್ನು ಅವಲಂಭಿಸಿದ್ದಾರೆ.
ರಸ್ತೆ ಹಾಳಾಗಿದ್ದರಿಂದ ಶಾಲಾ ಬಸ್ ಇದರಲ್ಲಿ ಬರುವುದಿಲ್ಲ. ಹೀಗಾಗಿ ಶಾಲಾ ಮಕ್ಕಳು ಸ್ವಲ್ಪ ದೂರ ನಡೆದುಕೊಂಡು ಬಂದು ಬಸ್ನಲ್ಲಿ ಹೋಗಬೇಕಾದ ಪರಿಸ್ಥಿತಿಯಿದೆ.
ಈ ಕೆಸರುಮಯ ರಸ್ತೆಯಲ್ಲಿ ನಡೆಯುವಾಗ ಜಾರಿ ಬಿದ್ದರೆ ಮರಳಿ ಮನೆಗೇ ಬರಬೇಕು. ಪ್ರತೀ ವರ್ಷ ಸ್ಥಳೀಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ಮಳೆಗಾಲದಲ್ಲಿ ರಸ್ತೆ ರಿಪೇರಿ ಮಾಡಿಸುತ್ತಿದ್ದರು. ಆದರೆ ಈ ಬಾರಿ ಇದರ ದುರಸ್ತಿ ನಡೆಯದಿರುವುದರಿಂದ ರಸ್ತೆ ಕೆಸರುಮಯವಾಗಿದೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.













