ಧರ್ಮಸ್ಥಳ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.14ರಂದು ಸಂಘದ ಸಾಧನಾ ಕಟ್ಟಡದ ಅಟಲ್ ಜೀ ಸಭಾಭವನದಲ್ಲಿ ನಡೆಯಿತು.

ಸಂಘವು ವರದಿ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ರೂ.2.89 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರ ಫಲವಾಗಿ ಸದಸ್ಯರಿಗೆ ಶೇ.21ರಷ್ಟು ಡಿವಿಡೆಂಡ್ ನ್ನು ಸಂಘದ ಅಧ್ಯಕ್ಷ ಪ್ರೀತಮ್ ಡಿ. ಘೋಷಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರೀತಮ್ ಡಿ., ಸದಸ್ಯರು ಸಂಘದ ಮೇಲೆ ಇಟ್ಟಿರುವ ಅವಿಚ್ಛಿನ್ನ ವಿಶ್ವಾಸ ಮತ್ತು ನಂಬಿಕೆಯ ಫಲವಾಗಿ ಸಂಘದ ಠೇವಣಿ ರೂ.100 ಕೋಟಿ ಮೀರಿದೆ ಎಂದು ತಿಳಿಸಿದರು. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಸಹಕಾರವೇ ಪ್ರಮುಖ ಶಕ್ತಿಯಾಗಿದೆ. ಮುಂದಿನ ವರ್ಷ ಹೊಸ ಸ್ಥಳ ಖರೀದಿಸಿ ಅಲ್ಲಿ ವಾರ್ಷಿಕ ಮಹಾಸಭೆ ನಡೆಸುವ ಉದ್ದೇಶವಿದ್ದು, ಸದಸ್ಯರ ಅನುಕೂಲಕ್ಕಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ವಾರ್ಷಿಕ ವರದಿ ಮಂಡಿಸಿದರು. ಸಂಘದ ಆರ್ಥಿಕ ಸಾಧನೆ, ಸಾಲ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಾಧಕರಿಗೆ ಸನ್ಮಾನ: ಸಂಘದ 13 ಮಂದಿ ಹಿರಿಯ ಸದಸ್ಯರು, ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಕು. ಮಾಧುರ್ಯ ಅನನ್ಯ ಹಾಗೂ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಾಂಭವಿ ರೈ, ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ದನ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ್, ವಿಕ್ರಂ ಗೌಡ, ತಂಗಚ್ಚನ್ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.
ಹಿರಿಯ ಫಿಗ್ಮಿ ಸಂಗ್ರಹಕ ಎ.ಎಸ್. ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು, ಸದಸ್ಯರು ಸಹಕರಿಸಿದರು.













