ಉಜಿರೆ : ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ರಿ.) ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉಜಿರೆ ಸರ್ಕಲ್ ಬಳಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ತಂಗಚ್ಚನ್ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಸಾವಿರಾರು ಜನರ ರಕ್ತ, ಬೆವರು ಮತ್ತು ಪ್ರಾಣದ ತ್ಯಾಗದ ಫಲ ಇದು. ಸಿಕ್ಕಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ದೇಶದ ಏಕತೆಯನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶದ ಧ್ವಜ ಮತ್ತು ಗೌರವದ ಮುಂದೆ ತಮ್ಮ ಸುಖ-ಭೋಗಗಳು ಹಾಗೂ ಜೀವವೂ ನಗಣ್ಯ ಎನ್ನುವುದು ಯೋಧರ ಅಚಲ ನಂಬಿಕೆ. ಜಾತಿ, ಧರ್ಮಗಳ ಹೆಸರಲ್ಲಿ ಜಗಳವಾಡದೆ, ಎಲ್ಲರೂ ಒಗ್ಗಟ್ಟಿನಿಂದ ಬದುಕುವುದೇ ನಿಜವಾದ ಸ್ವಾತಂತ್ರ್ಯ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಸುರೇಶ್ ಗೌಡ, ಸುರೇಶ್ ಭಟ್ ಮತ್ತು ಇನ್ನಿತರ ಯೋಧರು, ಶಕ್ತಿ ಕ್ಲಿನಿಕ್ ನ ಡಾ. ಪ್ರಕಾಶ್, ಧ.ಮಂ.ಅ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಉದ್ಯಮಿಗಳಾದ , ಗಣೇಶ್ ಫ್ಲೋರ್ ಮಿಲ್ ನ ನಾಗರಾಜ ಕಾಮತ್, ಡಾ. ಸವೇರಾ ಪಿಂಟೋ, ಹೋಟೆಲ್ ಚಿಪ್ಸ್ ವಿಲೇಜ್ ನ ಶ್ರೀಮತಿ ಜಯಂತಿ, ವಿಕ್ರಂ, ಪ್ರಕಾಶ್, ಯೋಗೀಶ್ ಗೌಡ, ಜಾನ್ ಕೆ.ಟಿ., ಜಾನ್ ಎಂ.ಟಿ., ಬಿ.ಕೆ. ಜೋಸೆಫ್, ರವಿಪ್ರಸಾದ್ ಸೇರಿದಂತೆ ಯೋಧರು, ವೈದ್ಯರು, ಶಿಕ್ಷಕರು, ಉದ್ಯಮಿಗಳು ಮತ್ತು ಹಿರಿಯ ವರ್ತಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅನುಗ್ರಹ ಇಂಗ್ಲಿಷ್ ಮೀಡಿಯಂ ಶಾಲೆ, ಜನಾರ್ಧನ ಶಾಲೆ ಮತ್ತು SDM NSS ವಿಭಾಗದ ಮಕ್ಕಳು ದೇಶಭಕ್ತಿ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಯು.ಎಚ್. ನಿರೂಪಿಸಿದರು. ಸಂಘದ ಅಧ್ಯಕ್ಷರು ವಂದಿಸಿದರು. ಸಭೆಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.












