ಬೆಳ್ತಂಗಡಿ: ಯೋಗ ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಯೋಗಾಭ್ಯಾಸ, ರಾಷ್ಟ್ರಭಕ್ತಿ ಹಾಗೂ ದೇಶಪ್ರೇಮದ ಭಾವನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಿತ್ಯದ ಯೋಗಾಭ್ಯಾಸದ ಬಳಿಕ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ಎಲ್ಲರೂ ಭಕ್ತಿಭಾವದಿಂದ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ಮಾತೃಭೂಮಿಗೆ ಗೌರವ ಸಮರ್ಪಿಸಿದರು.
ನಂತರ ನಡೆದ ಬೌದ್ಧಿಕ ಕಾರ್ಯಕ್ರಮವನ್ನು ಅಶ್ವತ್ ನಡೆಸಿಕೊಟ್ಟರು. ಸ್ವಾತಂತ್ರ್ಯವೆಂದರೆ ಕೇವಲ ಬಂಧನಗಳಿಂದ ಮುಕ್ತಿ ಪಡೆಯುವುದಲ್ಲ; ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳು ಹಾಗೂ ರಾಷ್ಟ್ರದ ಬಗ್ಗೆ ಜವಾಬ್ದಾರಿಯುತವಾಗಿ ಬದುಕುವುದೇ ನಿಜವಾದ ಸ್ವಾತಂತ್ರ್ಯ ಎಂಬ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳ್ತಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ಉಮಾ ರಾವ್ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ, ದೇಶದ ಏಕತೆ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಮಹತ್ವವನ್ನು ನೆನಪಿಸಿದರು.
ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಗಣಪತಿ ನೆರವೇರಿಸಿದರು. ರಾಷ್ಟ್ರಭಕ್ತಿಯೊಂದಿಗೆ ನಡೆದ ಈ ಆಚರಣೆಯನ್ನು ಶಾಖೆಯ ಶಿಕ್ಷಕರಾದ ಕೋಮಲ ನಡಸಿಕೊಟ್ಟರು. ಶಾಖೆಯ ಸಂಚಾಲಕ ವಸಂತ ಹಾಗೂ ಯೋಗಬಂಧುಗಳು ಉಪಸ್ಥಿತರಿದ್ದರು.












