ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ದೇಶಭಕ್ತಿಯ ಸಂದೇಶವನ್ನು ಸಾರುವ ಹಾಡು, ನೃತ್ಯ, ಭಾಷಣ, ಅಭಿನಯ, ಗೀತೆ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಪೂರ್ವ ಪ್ರಾಥಮಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಅವರ ಧರ್ಮಪತ್ನಿ ಅರುಣಾ ಶೆಟ್ಟಿಯವರು ಆಗಮಿಸಿದ್ದರು. ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ, ಪ್ರಕೃತಿಯ ಮಡಿಲಿನಲ್ಲಿ ಮಕ್ಕಳು ಹೇಗೆ ಬೆಳೆದು, ಪರಿಸರದೊಂದಿಗೆ ಬೆರೆಯಬೇಕು ಎಂಬುದನ್ನು ಸರಳವಾಗಿ ಹಾಗೂ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.

ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳ ಅದ್ಭುತ ಪ್ರತಿಭಾ ಪ್ರದರ್ಶನವನ್ನು ಮೆಚ್ಚಿ ಅಭಿನಂದಿಸಿದರು. ಉನ್ನತ ಪ್ರಾಥಮಿಕ ವಿಭಾಗದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿಡ್ಲೆ ವಲಯದ ಸಂಪನ್ಮೂಲ ಅಧಿಕಾರಿ ಪ್ರತಿಮಾ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಹಾಡಿನ ಮೂಲಕ ತಿಳಿಹೇಳಿದರು. ಹಾಗೆಯೇ ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಬೇಕು ಎಂಬ ಮಾತನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪೂರ್ವ ಪ್ರಾಥಮಿಕ ವಿಭಾಗದ ಕಾರ್ಯಕ್ರಮದಲ್ಲಿ ಯುಕೆಜಿ ವಿದ್ಯಾರ್ಥಿಗಳಾದ ಪ್ರಿನ್ಸ ಹಾಗೂ ಹನಿಷ್ಕ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮಯೂಕ್ ಹಾಗೂ ಹಿತ ಧನ್ಯವಾದ ಸಮರ್ಪಿಸಿದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಾದ ಅಚಿಂತ್ಯ ಹಾಗೂ ಶರ್ವಾಣಿ ಡಿಪಿ ನಿರ್ವಹಿಸಿ, ಕುಮಾರಿ ಮಾನ್ವಿ ಸ್ವಾಗತಿಸಿ , ಮನಸ್ವಿ ವಂದಿಸಿದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ. ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮವು ಮಕ್ಕಳ ಪ್ರತಿಭೆ, ಸೃಜನಶೀಲತೆ ಹಾಗೂ ಪರಿಸರ ಮತ್ತು ದೇಶದ ಮೇಲಿನ ಕಾಳಜಿಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಹೆತ್ತವರು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.












