ಬೆಳ್ತಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ಟಿವಿ ಲೀಡರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬೆಳ್ತಂಗಡಿ ಬಿಲ್ಲವ ಅಭಿಮಾನಿ ಬಳಗದ ವತಿಯಿಂದ ಆ.16ರಂದು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಗೌರವಾಭಿನಂದಿಸಲಾಯಿತು.

ಎರಡು ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಪೂಂಜ ಅವರು ಸಮಾಜಮುಖಿ ಚಿಂತನೆಯೊಂದಿಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರ್ವತೋಮುಖ ಪ್ರಗತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ಸಹಪ್ರಭಾರಿ ಜಯಂತ್ ಕೋಟ್ಯಾನ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ. ವಸಂತ ಸಾಲಿಯಾನ್, ಶಾಸಕ ಹರೀಶ್ ಪೂಂಜ ಅವರ ಧರ್ಮಪತ್ನಿ ಡಾ. ಸ್ವೀಕೃತ, ಬೆಳ್ತಂಗಡಿ ಸುವರ್ಣ ಆರ್ಕೇಡ್ ಮಾಲಕ ವೈ. ನಾಣ್ಯಪ್ಪ ಪೂಜಾರಿ, ಬಿಲ್ಲವ ಮುಖಂಡ ಬಿ. ಜನಾರ್ದನ ಪೂಜಾರಿ ಗೇರುಕಟ್ಟೆ, ಕತಾರ್ ಬಿಲ್ಲವ ಸಂಘದ ಅಧ್ಯಕ್ಷೆ ಅಪರ್ಣ ಶರತ್, ಬಿಲ್ಲವ ಮುಖಂಡ ಕರುಣಾಕರ ಸುವರ್ಣ ಉಪ್ಪಿನಂಗಡಿ, ಬೆಂಗಳೂರು ಉದ್ಯಮಿ ದಯಾನಂದ ಪೂಜಾರಿ, ಇರುವೈಲು ಪಾಣಿಲದ ಸತೀಶ್ಚಂದ್ರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಕಂಬಳ ಕ್ಷೇತ್ರದ ಸಾಧಕ ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ ಹಾಗೂ ಶೇಖರ ಪೂಜಾರಿ ನಾರಾವಿ ಉಪಸ್ಥಿತರಿದ್ದರು.
ಬಿಲ್ಲವ ಮುಖಂಡ ಜಯಂತ್ ಕೋಟ್ಯಾನ್ ಸ್ವಾಗತಿಸಿದರು. ಮುಖಂಡ ಸದಾನಂದ ಪೂಜಾರಿ ಉಂಗೀಲಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಸನ್ಮಾನ ಪತ್ರ ವಾಚಿಸಿದರು. ಸೌಮ್ಯ ಅಶೋಕ್ ಹಾಗೂ ಆಶಾ ಉಮೇಶ್ ಪ್ರಾರ್ಥನೆ ಸಲ್ಲಿಸಿದರು. ಯಶೋಧರ ಬಂಗೇರ ಮರೋಡಿ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಬುಣ್ಣನ್ ವಂದಿಸಿದರು.ಪ್ರಶಾಂತ್ ಎಂ. ಪಾರೆಂಕಿ, ರಾಜೇಶ್ ಮೂಡುಕೋಡಿ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.












