ಉಜಿರೆ: ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ಇದರ ನೇತೃತ್ವದಲ್ಲಿ ತುಳುನಾಡಿನ ಸಂಸ್ಕೃತಿ, ಆಹಾರ ಪದ್ಧತಿ, ಆಚಾರ–ವಿಚಾರ ಹಾಗೂ ಪರಂಪರೆಯನ್ನು ಬಿಂಬಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಚಿತ್ರೇಶ್ ಶೆಟ್ಟಿ ಉಜಿರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬಂಟರ ಸಂಘ ಬೆಳ್ತಂಗಡಿ ತಾಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ರಾಜು ಶೆಟ್ಟಿ ಬೆಂಗೆತ್ತ್ಯಾರು ಮಾತನಾಡಿಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ನಾವೆಲ್ಲರೂ ಕೈಜೋಡಿಸಬೇಕು. ಇಂತಹ ಕಾರ್ಯಕ್ರಮಗಳು ಸಮಾಜದ ಬಾಂಧವ್ಯವನ್ನು ಮತ್ತಷ್ಟು ಬೆಸೆಯಲು ಸಹಕಾರಿಯಾಗುತ್ತವೆ ಎಂದರು.

ಬಂಟರ ಸಂಘ ಬೆಳ್ತಂಗಡಿ ನಿರ್ದೇಶಕ ಉಮೇಶ್ ಶೆಟ್ಟಿ ಉಜಿರೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಂಟರ ಸಂಘ ಬೆಳ್ತಂಗಡಿ ತಾಲೂಕು ಮಹಿಳಾ ವಿಭಾಗದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಸುಧಾ ಪಿ. ಶೆಟ್ಟಿ ಹಾಗೂ ಬಂಟರ ಸಂಘ ಉಜಿರೆ ವಲಯದ ಅಧ್ಯಕ್ಷ ರವೀಂದ್ರ ಶೆಟ್ಟಿ ಸುರಭಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ಕಾರ್ಯದರ್ಶಿ ಕರುಣಾಕರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟರ ಸಂಘ ಬೆಳ್ತಂಗಡಿ ತಾಲೂಕು ನೂತನ ನಿರ್ದೇಶಕರಾಗಿ ಆಯ್ಕೆಯಾದ ಉಜಿರೆ ವಲಯದ ಜಯಂತ್ ಶೆಟ್ಟಿ ಕುಂಟಿನಿ, ವೆಂಕಟರಮಣ ಶೆಟ್ಟಿ, ನಿರಂಜನ್ ಶೆಟ್ಟಿ, ವನಿತಾ ವಿ. ಶೆಟ್ಟಿ ಹಾಗೂ ಪುರುಷೋತ್ತಮ ಶೆಟ್ಟಿ ಅಗರಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಸದಾಶಿವ ಶೆಟ್ಟಿ ಕಕ್ಕೆಜಾಲು ಅವರ ಪ್ರಾಯೋಜಕತ್ವದಲ್ಲಿ, ಬಂಟರ ಸಂಘ ಗ್ರಾಮ ಸಮಿತಿ ಉಜಿರೆ ಉಪಾಧ್ಯಕ್ಷ ಹಾಗೂ ಸಾಂಸ್ಕೃತಿಕ ಸಂಚಾಲಕ ನಿರಂಜನ್ ಶೆಟ್ಟಿ ಉಜಿರೆ ಅವರ ಮುಂದಾಳತ್ವದಲ್ಲಿ, ಜೊತೆ ಕಾರ್ಯದರ್ಶಿ ಪವಿತ್ರ ಶೆಟ್ಟಿ ಕುಂಟಿನಿ ಹಾಗೂ ಕುಮಾರಿ ಸೋನಾಕ್ಷಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಭಾ ಕಾರ್ಯಕ್ರಮಕ್ಕೂ ಮುನ್ನ ಮಕ್ಕಳ ಹಾಗೂ ಮಹಿಳೆಯರಿಂದ ಆಷಾಢದ ಸೊಗಡು ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೃಷಿ ಪರಿಕರಗಳ ಪ್ರದರ್ಶನವೂ ನಡೆಯಿತು. ಅಲ್ಲದೆ, ಕುಟ್ಟಿ–ದೊಣ್ಣೆ, ಲಗೋರಿ, ಕುಂಟೆಬಿಲ್ಲೆ, ಕಲ್ಲಾಟ, ಚೆನ್ನೆಮಣೆ ಸೇರಿದಂತೆ ಹಳೆಯ ಕಾಲದ ಆಟಗಳ ಆಯೋಜನೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.ಆಷಾಢ ತಿಂಗಳ ವಿಶೇಷ ತಿಂಡಿ–ತಿನಿಸುಗಳ ಮೇಳದಲ್ಲಿ ಸುಮಾರು 42 ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು.
ಬಂಟ ಸಮಾಜದ ಬಾಂಧವರಿಗಾಗಿ ಪರಿಚಯಿಸಲಾದ ‘ಬಂಟ ನಿಧಿ’ ಕಾರ್ಯಕ್ರಮದ ಕುರಿತು ಮಂಜುನಾಥ್ ಶೆಟ್ಟಿ ನಿಡಿಗಲ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಉಜಿರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಮಾಜದ ಓರ್ವ ಸದಸ್ಯರಿಗೆ ರೂ.10,000 ಸಹಾಯಧನ ನೀಡಿ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ವತ್ ಪಿಯು ಕಾಲೇಜು ಗುರುವಾಯನಕೆರೆ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ, ಸುರೇಶ್ ಶೆಟ್ಟಿ ಲಾಯಿಲಾ, ಬಂಟರ ಸಂಘ ಬೆಳ್ತಂಗಡಿ ತಾಲೂಕು ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಬಿ.ಎನ್.ವೈ.ಎಸ್. ಉಜಿರೆ ಪ್ರಾಂಶುಪಾಲ ಡಾ. ಶಿವಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರಘುರಾಮ್ ಶೆಟ್ಟಿ ಸಾಧನ, ಜಯರಾಮ್ ಶೆಟ್ಟಿ ಕೆಂಬರ್ಜೆ, ಬಂಟರ ಸಂಘ ಉಜಿರೆ ವಲಯ ಉಪಾಧ್ಯಕ್ಷೆ ಪವಿತ್ರ ಸುಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಕುಂಟಿನಿ, ಪುಷ್ಪಾವತಿ ಆರ್. ಶೆಟ್ಟಿ ಉಜಿರೆ, ಅಜಿತ್ ಶೆಟ್ಟಿ ಕುಂಜರ್ಪ, ಸುರೇಶ್ ಶೆಟ್ಟಿ ಉಂಡ್ಯಪು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಿತಿ ಉಜಿರೆ ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಸೋನಾಕ್ಷಿ ಶೆಟ್ಟಿ ಹಾಗೂ ಮನಿಶ್ ಶೆಟ್ಟಿ ನಿರ್ವಹಿಸಿದರು.












