ಉಜಿರೆ: ತಾಂತ್ರಿಕ ಕಲಿಕೆಯ ಆಕರ್ಷಣೀಯ ಟ್ರೆಂಡ್ನ ನಡುವೆಯೂ ಸ್ವಾಯತ್ತ ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳು ಹೊಸ ಜ್ಞಾನ ಸೃಷ್ಟಿಸುವ ವಿಶ್ವವಿದ್ಯಾಲಯಗಳ ಮೂಲ ಉದ್ದೇಶಕ್ಕೆ ಅನುಗುಣವಾದ ಮಹತ್ವದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಶೈಕ್ಷಣಿಕ ಅಸ್ಮಿತೆ ಪರಿಚಯಿಸಲು ಇಂದ್ರಪ್ರಸ್ಥ ಸಭಾಂಗಣದಲ್ಲಿ ಆ.19 ರಂದು ಆಯೋಜಿಸಿದ ಮಾರ್ಗದರ್ಶಿ ಇಂಡಕ್ಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಿದ್ದೇ ಹೊಸದಾದ ಜ್ಞಾನ ಸೃಷ್ಟಿಯ ಪ್ರಕ್ರಿಯೆಯನ್ನು ನಿರಂತರವಾಗಿ ಚಾಲ್ತಿಯಲ್ಲಿರಿಸುವುದಕ್ಕೆ. ವಿಶ್ವವಿದ್ಯಾಲಯಗಳ ಆವರಣದಲ್ಲಿ ಮಾತ್ರವಲ್ಲದೇ ಅವುಗಳೊಂದಿಗೆ ಸಂಯೋಜಿತವಾದ ಸ್ವಾಯತ್ತ ಮತ್ತು ಇತರೆ ಕಾಲೇಜುಗಳು ಈ ಪ್ರಕ್ರಿಯೆಯನ್ನು ಅರ್ಥಪೂರ್ಣವಾಗಿ ವಿಸ್ತರಿಸುತ್ತಾ ಬಂದಿವೆ. ಬಹಳಷ್ಟು ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯಕೇಂದ್ರಿತ ಕೋರ್ಸ್ಗಳನ್ನು ನೆಚ್ಚಿಕೊಳ್ಳುತ್ತಿರುವ ಟ್ರೆಂಡ್ನ ಮಧ್ಯೆಯೂ ಜ್ಞಾನಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಯಾಗಲಿಚ್ಛಿಸುವ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಯೋಜಿತ ಸ್ವಾಯತ್ತ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಿದರು.
ವಿಶ್ವದ ವಿವಿಧೆಡೆಗಳಿಂದ ಲಭ್ಯವಾಗುವ ಆಲೋಚನಾ ಕ್ರಮಗಳೆಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಸ್ನಾತಕೋತ್ತರ ಶೈಕ್ಷಣಿಕ ಹಂತ ನೆರವಾಗುತ್ತದೆ. ವಿಶ್ವಮಟ್ಟದಲ್ಲಿ ಸಾರ್ವಕಾಲಿಕವಾಗಿ ಸ್ವೀಕೃತವಾಗುವಂತಹ ಚಿಂತನೆ, ಸಂವಾದ ಮತ್ತು ಜಾಗತಿಕ ವೈಚಾರಿಕ ಅನುಸಂಧಾನ ಈ ಮೂಲಕ ಸಾಧ್ಯವಾಗುತ್ತದೆ. ಪದವಿ ಹಂತದಲ್ಲಿ ಗಳಿಸಿಕೊಂಡ ಜ್ಞಾನದ ಆಧಾರದ ಮೇಲೆ ಹೊಸದಾದ ಜ್ಞಾನ ಸೃಷ್ಟಿಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಹೊಸದಾಗಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕು.
ತಿಳಿಯುವ ಕುತೂಹಲ, ಕಲಿಕೆಯ ಆಸಕ್ತಿ ಆಧಾರದ ಪ್ರಶ್ನಿಸುವ ಮನೋಧರ್ಮ ಮತ್ತು ನಿರಂತರ ತೊಡಗಿಸಿಕೊಳ್ಳುವಿಕೆಯ ಶ್ರದ್ಧೆಯ ಮೂಲಕ ಜ್ಞಾನಮಾರ್ಗಗಗಳ ಶೋಧದಲ್ಲಿ ನಿರತರಾಗಬೇಕು. ಆ ಮೂಲಕ ತಾಂತ್ರಿಕ ಯುಗಕ್ಕೆ ‘ಜ್ಞಾನ’ದ ಸಂಸ್ಕಾರ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವ ಬದ್ಧತೆಯಿಂದ ಈ ಹೊಣೆಗಾರಿಕೆಯ ಯಶಸ್ವಿ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿ, ಎಲ್ಸ್ವಿಯರ್ ಟೆಕ್ನಾಲಜಿಯ ಎಚ್.ಆರ್ ಲೀಡರ್ ರೋಹಿತ್ ಕ್ಯಾಸ್ಟಲಿನೊ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯಗಳ ಜೊತೆಗೆ ಪಠ್ಯೇತರ ಅನ್ಯಜ್ಞಾನಗಳ ಕಡೆಗೂ ಗಮನಹರಿಸಬೇಕು ಎಂದರು. ಸಂವಹನ ಕೌಶಲ್ಯ, ಸಮಯ ಪ್ರಜ್ಞೆ, ಶಿಸ್ತುಬದ್ಧತೆ ಮತ್ತು ಗ್ರಂಥಾಲಯದ ಸಮಯೋಚಿತ ಸದ್ಬಳಕೆಯ ಮೂಲಕ ವ್ಯಕ್ತಿತ್ವಕ್ಕೆ ವೈಶಿಷ್ಟö್ಯತೆ ದಕ್ಕುತ್ತದೆ. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬದುಕಿನ ಹಾದಿಯನ್ನು ಉದಾತ್ತಗೊಳಿಸಿಕೊಳ್ಳಬೇಕು ಎಂದರು. ಸ್ನಾತಕೋತ್ತರ ಹಂತದ ಅಧ್ಯಯನ ಮತ್ತು ವ್ಯಕ್ತಿತ್ವ ವಿಕಸನದ ಮಾದರಿಗಳನ್ನು ಪರಿಚಯಿಸಿದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳಿದವರಲ್ಲಿ ಗೌರವ ಭಾವ ಮೂಡಿಸಿ ಸ್ವಯಂ ಘನತೆಯನ್ನು ಇನ್ನಷ್ಟು ಎತ್ತರಿಸಿಕೊಳ್ಳುವಂತಹ ನಡೆ-ನುಡಿಗಳೊಂದಿಗೆ ಗುರುತಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಬದುಕನ್ನು ಸಮಗ್ರವಾಗಿ ಗೆಲ್ಲಿಸಿಕೊಳ್ಳಬಹುದು. ಇದಕ್ಕೆ ಬೇಕಾದ ಸ್ಫೂರ್ತಿದಾಯಕ ಶೈಕ್ಷಣಿಕ ಪರಿಸರ ಎಸ್.ಡಿ.ಎಂ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ್ದು ಎಂದು ನುಡಿದರು.
ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ನಂದಕುಮಾರಿ ಕೆ.ಪಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ನೆಫೀಸತ್ ಪಿ ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಸಹಾಯಕ ಪ್ರಾಧ್ಯಾಪಕಿ ಶ್ವೇತಾಕುಮಾರಿ ಅತಿಥಿಗಳನ್ನು ಪರಿಚಯಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ. ವಂದಿಸಿದರು.












