ಬೆಳ್ತಂಗಡಿ: ಸರಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆಯನ್ನು ಮಾಡುವ ಅಕ್ಕಿಯು ಕಳಪೆ ಗುಣಮಟ್ಟದಲ್ಲಿ ಪತ್ತೆಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಿಡ್ಲೆ, ಪಟ್ರಮೆ ಲೈನಿಗೆ ಆಗಸ್ಟ್ 19ರಂದು ಬೆಳಗ್ಗೆ ಲಾರಿ ಪೂರ್ತಿ ಪಡಿತರ ಅಕ್ಕಿ ಬಂದಿದ್ದು ನಿಡ್ಲೆ ಪಡಿತರ ಕೇಂದ್ರದಲ್ಲಿ ಅಂದಾಜು 50 ರಿಂದ 100 ಗೋಣಿ ಅಕ್ಕಿಯನ್ನು ಅನ್ಲೋಡ್ ಮಾಡಿ ತೆರಳಿದ್ದಾರೆ. ನಿಡ್ಲೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ನಾಗರಿಕರು ಅಕ್ಕಿ ಬಂದ ಖುಷಿಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಎರಡು ವರ್ಷಗಳ ಹಿಂದೆ ಅಂದರೆ ೨೦೨೪-೨೫ ರಲ್ಲಿ ಪ್ಯಾಕ್ ಮಾಡಲಾದ ಗೋಣಿಯನ್ನು ತೆರೆದು ನೋಡಿದಾಗ ಅಕ್ಕಿ ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹುಳ ಆಗಿರುವುದು ಕಂಡು ಬಂದಿತ್ತು. ಸ್ಥಳೀಯರು ಹೇಳುವ ಪ್ರಕಾರ ಈ ಅಕ್ಕಿಯನ್ನು ಪ್ರಾಣಿಗಳಿಗೆ ನೀಡಲು ಕೂಡಾ ಯೋಗ್ಯವಾಗಿಲ್ಲ ಅಷ್ಟು ಕೆಟ್ಟು ಹೋಗಿದೆ.
ಬೆಳ್ತಂಗಡಿ ಆಹಾರ ಇಲಾಖೆ ಆಹಾರ ಶಿರಸ್ತೆದಾರ್ ಸಂತೋಷ್ ಮತ್ತು ಆಹಾರ ನಿರೀಕ್ಷಕರು ವಿಶ್ವ.ಕೆ ಆ.20 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಂಗಳೂರು (FCI) ಭಾರತೀಯ ಆಹಾರ ನಿಗಮ ಗೋಡೌನಿಂದ ಬಂದ ಅಕ್ಕಿಗಳ ಲೋಡಿನಲ್ಲಿ 6 ಗೋಣಿಯಲ್ಲಿ ಕಳಪೆ ಗುಣಮಟ್ಟದ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿಯನ್ನು ವಿತರಿಸದಂತೆ ಸೂಚನೆ ನೀಡಿದ ಅಧಿಕಾರಿಗಳು. ಈ ಬಗ್ಗೆ ಮಹಜರು ಮಾಡಿ ಮಂಗಳೂರು ಆಹಾರ ನಾಗರಿಕರ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಹೇಮಲತಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.











