ನಾರಾವಿ: ಸಂತ ಅಂತೋಣಿ ಪದವಿ ಪೂರ್ವ ಕಾಲೇಜಿನಲ್ಲಿ “ಉತ್ತಮ ಭವಿಷ್ಯಕ್ಕಾಗಿ ಒಗ್ಗಟ್ಟಾಗಿ” ಎಂಬ ಧ್ಯೇಯವಾಕ್ಯದೊಂದಿಗೆ ಪೋಷಕ–ಶಿಕ್ಷಕ ಸಭೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಆರೋಗ್ಯ, ವ್ಯಕ್ತಿತ್ವ ವಿಕಸನ ಹಾಗೂ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರದ ಮಹತ್ವವನ್ನು ಸಭೆಯಲ್ಲಿ ವಿಶೇಷವಾಗಿ ಹೇಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸಂಚಾಲಕರಾದ ವಂದನೀಯ ಫಾದರ್ ಜೆರೋಮ್ ಡಿಸೋಜಾ ವಹಿಸಿದ್ದರು. ಪ್ರಾಂಶುಪಾಲರಾದ ಸಂತೋಷ್ ಸಲ್ಡಾನಾ ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ಮಾತುಗಳನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ (BHEO) ಶ್ರೀಮತಿ ಅಮ್ಮಿ, ಬೆಳ್ತಂಗಡಿಯ RKSK ಅಧಿಕಾರಿ ಕು. ಸೌಮ್ಯಾ, ಹಾಗೂ ಉಪನ್ಯಾಸಕರಾದ ವಂದನೀಯ ಫಾದರ್ ರೂಪೇಶ್ ತಾವ್ರೊ ಉಪಸ್ಥಿತರಿದ್ದರು.
ಅವರು ಮಾನಸಿಕ ಆರೋಗ್ಯ, ನೈತಿಕ ಮೌಲ್ಯಗಳು, ಸಮಯಪಾಲನೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೋಷಕರು ಮತ್ತು ಶಿಕ್ಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ವಿವರಿಸಿದರು.
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರ ನಡವಳಿಕೆ, ಸಾಮಾಜಿಕ ಕೌಶಲ್ಯಗಳು ಮತ್ತು ಮೌಲ್ಯಾಧಾರಿತ ಜೀವನದ ಕುರಿತು ಪೋಷಕರೊಂದಿಗೆ ವಿವರವಾದ ಚರ್ಚೆ ನಡೆಸಲಾಯಿತು. ಪೋಷಕರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಸುಚೇತಾ ನಿರೂಪಿಸಿದರು. ಉಪನ್ಯಾಸಕಿ ಕು. ಶ್ರೀವಿದ್ಯಾ ವಂದನಾರ್ಪಣೆಗೈದರು.











