ಬೆಳ್ತಂಗಡಿ ತಾಲೂಕು ಕಚೇರಿ ದಿನನಿತ್ಯ ಜನರಿಂದ ತುಂಬಿ ತುಳುಕುತ್ತದೆ. ಆದರೆ ಇಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡರೆ ಪರ್ಯಾಯ ವ್ಯವಸ್ಥೆ ಇಲ್ಲ. ಇರುವ ಎರಡೂ ಜನರೇಟರ್ ಯಾವುದೇ ಪ್ರಯೋಜನಕ್ಕಿಲ್ಲ. ಜನರು ತಮ್ಮ ಅಗತ್ಯ ಕೆಲಸಕ್ಕಾಗಿ ಕಾದು ಕಾದು ವಾಪಸ್ ಹೋಗಬೇಕಾದ ಪರಿಸ್ಥಿತಿ ಇದೆ.

ಬೆಳ್ತಂಗಡಿ ತಾಲೂಕು ಕಚೇರಿಯ ನೂತನ ಕಟ್ಟಡ 2018 ರಲ್ಲಿ ಉದ್ಘಾಟನೆಗೊಂಡು ಕೇವಲ 8 ವರ್ಷಗಳಾಯಿತು ಅಷ್ಟೇ. ಉದ್ಘಾಟನಾ ಸಂದರ್ಭದಲ್ಲಿ ಎರಡು ಜನರೇಟರ್ ಗಳಿತ್ತು. ಈಗಲೂ ಇದೆಯಾದರೂ ಎರಡೂ ಜನರೇಟರ್ ಗಳು ಯಾವುದೇ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ವಿದ್ಯುತ್ ಕೈಕೊಟ್ಟರೆ ಕಂಪ್ಯೂಟರ್ ಗಳು ಸಂಪೂರ್ಣ ಬಂದ್ ಆಗುತ್ತದೆ. ಪರ್ಯಾಯ ವ್ಯವಸ್ಥೆಯಂತೂ ಯಾವುದೂ ಇಲ್ಲ. ಸಿಬ್ಬಂದಿಗಳು ಜನರಿಂದ ಬೈಸಿಕೊಂಡು ಸುಮ್ಮನೆ ಇರಬೇಕಾಷ್ಟೇ. ಕಚೇರಿ ವೆಚ್ಚದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆಗೊಳಿಸಿದರೂ ಪ್ರಯೋಜನವಿಲ್ಲ.
ಐದಾರು ವರ್ಷಗಳಿಂದ ಸತತವಾಗಿ ಜನರೇಟರ್ ಗಾಳಿ , ಮಳೆ , ಬಿಸಿಲಿಗೆ ಮೈಯೊಡ್ಡಿ ತಾಲೂಕು ಕಚೇರಿಯ ಬದಿಯಲ್ಲಿದ್ದರೂ ಇಲ್ಲಿನ ತಹಶೀಲ್ದಾರರುಗಳು ಮಾತ್ರ ತಮಗೂ , ಜನರೇಟರ್ ಗೂ ಯಾವುದೇ ರೀತಿಯ ಸಂಬಂಧ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಇನ್ನಾದರೂ ಲಕ್ಷಾಂತರ ರೂಪಾಯಿ ಮೌಲ್ಯದ ಎರಡೂ ಜನರೇಟರ್ ಗಳು ಜನರ ಉಪಯೋಗಕ್ಕೆ ಲಭ್ಯವಾಗಲಿ , ಅಥವಾ ಎರಡೂ ಜನರೇಟರ್ ಗಳು ತುಕ್ಕು ಹಿಡಿದು ಗುಜರಿ ಅಂಗಡಿ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.











