ಬೆಳ್ತಂಗಡಿ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಪಡಿತರ ಫಲಾನುಭವಿಗಳು ಗಂಟೆಗಟ್ಟಲೇ ಕಾಯುತ್ತಿದ್ದು ಸಮಸ್ಯೆ ತೀವ್ರಗೊಂಡರು ಸಮಸ್ಯೆ ಇನ್ನೂ ಬಗೆಹರಿಯದಿರುವುದು ಸಾರ್ವಜನಿಕರು ಆಕ್ರೋಶಕ್ಕೆ ಗುರಿಯಾಗಿದೆ.
ಕಳೆದ ನಾಲೈದು ದಿನಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಪಡಿತರ ಪಡೆಯಲು ಬಯೋಮೆಟ್ರಿಕ್ ನೀಡಲು ಬರುವ ಪ್ರತಿಯೊಬ್ಬರಿಗೂ ಪಡಿತರ ಅಂಗಡಿಯವರು ‘ಸರ್ವರ್ ಇಲ್ಲ’ ಎಂದು ಹೇಳುತ್ತಿದ್ದಾರೆ.
ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳು ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ಕಾದು ಮರಳಿ ಮನೆಗೆ ಹೋಗುವುದು ಸಾಮಾನ್ಯವಾಗಿದೆ. ಗುರುವಾರವೂ ಸರ್ವರ್ ಸಮಸ್ಯೆಯಾಗಿದೆ. ಈ ಬಾರಿ ಕೇಂದ್ರದ ಎನ್ ಏಫ್ ಎಸ್ ಎ ಯೋಜನೆಯಡಿ ಆಗಷ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದ್ದು ಅದಕ್ಕಾಗಿ ಎರಡು ಪ್ರತ್ಯೇಕ ಬಯೊಮೆಟ್ರಿಕ್ ಥಂಬ್ ನೀಡಬೇಕಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದು ಥಂಬ್ ಅಂಗೀಕರ ಗೊಂಡರೆ ಮತ್ತೊಂದು ಥಂಬ್ ಅಂಗೀಕರಕ್ಕೆ 20 ನಿಮಿಷ ಕಾಯುವ ಪರಿಸ್ಥಿತಿ ಇದೆ.
ತಾಲ್ಲೂಕಿನಲ್ಲಿ ಪಡಿತರ ಪಡೆಯುವ 3,258 ಅಂತ್ಯೋದಯ ಹಾಗೂ ಬಿಪಿಎಲ್ (ಪಿ.ಎಚ್.ಎಚ್) ಒಟ್ಟು 45, 128 ಪಡಿತರದಾರರಿದ್ದಾರೆ. ಶೇ. 60 ರಷ್ಟು ಪಡಿತರದಾರರ ಬಯೋಮೆಟ್ರಿಕ್ ಆಗಿದ್ದು. ಇನ್ನೂ ಶೇ. 40 ರಷ್ಟು ಬಯೋಮೆಟ್ರಿಕ್ ಬಾಕಿ ಇವೆ.
‘ಅಧಿಕಾರಿಗಳು ನಿತ್ಯ ಸರ್ವರ್ ಸಮಸ್ಯೆ ಎಂದು ಹೇಳುತ್ತಾರೆ. ವಾರ ಆಯ್ತು ನಿತ್ಯ ಬಂದು ಹೋಗುತ್ತಿದ್ದೇವೆ’ ಬಯೋಮೆಟ್ರೀಕ್ ಆಗುತ್ತಿಲ್ಲ ಎಂದು ಪಡಿತರ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದಾದ್ಯಂತ ಸರ್ವರ್ ಸಮಸ್ಯೆಯಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಮಸ್ಯೆ ಬಗೆಹರಿಯಲಿದೆ’ ಎಂದು ಬೆಳ್ತಂಗಡಿ ಆಹಾರ ಇಲಾಖೆ ಸುದ್ದಿ ಉದಯಕ್ಕೆ ಪ್ರತಿಕ್ರಿಯಿಸಿದೆ.











