ಬೆಳ್ತಂಗಡಿ: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸಹಕಾರಿಯಿಂದ ಸಮೃದ್ಧಿ ಸಂಘದ ಸದಸ್ಯರ ಅನುಕೂಲಕ್ಕಾಗಿ ಎಂಬ ಸದುದ್ದೇಶದೊಂದಿಗೆ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಕಚ್ಚಾರಸ್ತೆಗಳ ದುರಸ್ತಿ ಕಾರ್ಯ ಕೈಗೊಂಡಿದೆ.
ಸೊಸೈಟಿ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ ಅವರ ನೇತೃತ್ವದಲ್ಲಿ ಪಾರೆಂಕಿ, ಕುಕ್ಕಳ, ಸೋಣಂದೂರು ಹಾಗೂ ಮಾಲಾಡಿ ವ್ಯಾಪ್ತಿಯಲ್ಲಿ ಬರುವ ಕಚ್ಚಾರಸ್ತೆಗಳನ್ನು ದುರಸ್ತಿ ಮಾಡಲಾಯಿತು. ಮಳೆಗಾಲದಲ್ಲಿ ಹದಗೆಟ್ಟಿದ್ದ ರಸ್ತೆಗಳ ದುರಸ್ತಿಯಿಂದ ಗ್ರಾಮಸ್ಥರು, ರೈತರು ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲವಾಗಿದೆ.
ಸಹಕಾರಿ ಸಂಘಗಳು ಕೇವಲ ಸಾಲ-ವ್ಯವಹಾರಗಳಿಗೆ ಸೀಮಿತವಾಗದೆ, ಗ್ರಾಮೀಣ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಕೈಜೋಡಿಸಬಹುದು ಎಂಬುದಕ್ಕೆ ಮಡಂತ್ಯಾರು ಸೊಸೈಟಿಯ ಈ ಕಾರ್ಯ ಮಾದರಿಯಾಗಿದೆ. ಸಂಘದ ವತಿಯಿಂದ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸೊಸೈಟಿ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ, ಉಪಾಧ್ಯಕ್ಷ ಕಾಂತಪ್ಪ ಗೌಡ, ನಿರ್ದೇಶಕರಾದ ಕೆ. ಅರವಿಂದ ಜೈನ್, ಧನಲಕ್ಷ್ಮಿ, ಅಮಿತಾ ಪ್ರಿಯಾ ಲೋಬೋ, ಸುರೇಶ್ ಎಸ್., ಶಶಿಪ್ರಭಾ, ಮಹಾಬಲ ಕೆ., ಗಣೇಶ್ ಮೂಲ್ಯ, ಗೋಪಾಲಕೃಷ್ಣ ಕೆ., ಕಿಶೋರ್ ಕುಮಾರ್ ಶೆಟ್ಟಿ, ಪದ್ಮನಾಭ ಸಾಲಿಯಾನ್ ಹಾಗೂ ಸಿಇಒ ಜೋಕೀ ಡಿಸೋಜಾ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.











