ಬೆಳ್ತಂಗಡಿ: ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಸಂಭ್ರಮದಿಂದ ರಕ್ಷಾ ಬಂಧನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್ ಎಸ್ ನರಗುಂದ ರವರು ಭಾಗಿಯಾಗಿ ವಿಶೇಷ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸುತ್ತಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದರು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಕಾರ್ಯಕ್ರಮಕ್ಕೆ ಬಂದು ದೇವರ ಸಮಾನರಾಧಾ ಈ ಮಕ್ಕಳೊಂದಿಗೆ ರಕ್ಷೆಯನ್ನು ಕಟ್ಟಿಸಿಕೊಳ್ಳುತ್ತಿರುವುದು ನನ್ನ ಪುಣ್ಯ ಎಂದರು. ಅವರು ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಎಲ್ಲರಿಗೂ ರಕ್ಷಾಬಂಧನದ ಶುಭಹಾರೈಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯ ಆಗ್ನೇಸ್ ಚಾಕೊ ಅವರು ಕಾರ್ಯಕ್ರಮಕ್ಕೆ ಆಗಮಿಸಿ ವೈಫಲ್ಯತೆಯನ್ನು ದಿಟ್ಟತನದಿಂದ ಎದುರಿಸಿ ಮುನ್ನಡೆದರೆ ಶ್ರೇಷ್ಠ ಸಾಧನೆಯನ್ನು ಮಾಡಬಹುದು ಎಂದು ಮಕ್ಕಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು.
ನಿಕಟಪೂರ್ವ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಎಣಿಂಜೆ ಅವರು ವಿಶೇಷ ಮಕ್ಕಳಿಗೆ ಸಿಹಿ ಹಂಚಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಶುಭ ಹಾರೈಸಿದರು. ಬೆಳ್ತಂಗಡಿ ಟ್ರಾಫಿಕ್ ಠಾಣಾ ಉಪನಿರೀಕ್ಷಕರಾದ ಕಿಶೋರ್ ಹಾಗೂ ಇತರ ಸಿಬ್ಬಂದಿಗಳು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಇದರ ಸಲಹಾ ಸಮಿತಿ ಸದಸ್ಯರಾದ ಪ್ರೇಮ್ ರಾಜ್, ರೋಷನ್ ಸಿಕ್ವೇರಾ, ಸಂಗೀತಗಾರ ಸುನಿಲ್ ದೇವಾಡಿಗ ಉಜಿರೆ, ಕಾಂಟ್ರಾಕ್ಟರ್ ದಯಾನಂದ ಬೆಳ್ತಂಗಡಿ, ಹೋಟೆಲ್ ಮಾತ್ರ ಶ್ರೀ ಮಾಲಕ ಪ್ರಮೋದ್, ಸದಾಶಿವ ಲಾಯಿಲ ಹಾಗೂ ಸಾನಿಧ್ಯ ಕೇಂದ್ರದ ಅನೇಕ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾನಿಧ್ಯ ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಮತ್ತು ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಬಂದಂತಹ ಅತಿಥಿಗಳಿಗೆ ಆರತಿ ಬೆಳಗಿಸಿ ರಕ್ಷೆಯನ್ನು ಕಟ್ಟಿದರು.











