ಬಳೆಂಜ: ಶಿವಾಜಿ ಫ್ರೆಂಡ್ಸ್ ಕ್ಲಬ್ ಬಳೆಂಜ ಇವರ ನೇತೃತ್ವದಲ್ಲಿ ಬಳೆಂಜ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ವಿಶಿಷ್ಟ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ರಕ್ಷಾಬಂಧನ ಎಂದರೆ ಕೇವಲ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯಕ್ಕೆ ಸೀಮಿತವಾಗಿರದೆ, ಸಮಾಜ, ದೇಶ, ಪರಿಸರ ಹಾಗೂ ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರ ರಕ್ಷಣೆಯ ಸಂಕಲ್ಪವಾಗಬೇಕು ಎಂಬ ವಿಶೇಷ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ರಾಕೇಶ್ ಹೆಗಡೆ ಅವರು ಮಕ್ಕಳಿಗೆ ಸಹೋದರ-ಸಹೋದರಿಯರು ಪರಸ್ಪರ ಒಬ್ಬರನ್ನೊಬ್ಬರು ರಕ್ಷಿಸುವ ಸಂಕಲ್ಪ, ಮಕ್ಕಳಾದ ನಾವು ತಂದೆ-ತಾಯಿಯರ ಆರೈಕೆ ಹಾಗೂ ರಕ್ಷಣೆಯ ಜವಾಬ್ದಾರಿ, ಸಮಾಜದಲ್ಲಿ ಮಹಿಳೆಯರ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವ ಪ್ರತಿಜ್ಞೆ ಸ್ವೀಕರಿಸಲಾಯಿತು.
ಅಲ್ಲದೆ, ಇಡೀ ವಿಶ್ವದಲ್ಲಿಯೇ ಶಾಂತಿಯುತವಾಗಿ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ನೀಡಿರುವ ನಮ್ಮ ಭಾರತ ಮಾತೆಯ ರಕ್ಷಣೆ ಮತ್ತು ದೇಶದ ಏಕತೆ-ಸಮಗ್ರತೆಯನ್ನು ಕಾಪಾಡುವ ಸಂಕಲ್ಪ ಕೈಗೊಳ್ಳಲಾಯಿತು.
ದೇಶದ ಗಡಿಯಲ್ಲಿ ನಮ್ಮ ಸುರಕ್ಷತೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸ್ಮರಿಸುವ ಜೊತೆಗೆ, ದೇಶರಕ್ಷಣೆಗಾಗಿ ತೆರಳಿರುವ ಸೈನಿಕರ ಕುಟುಂಬದವರ ಬಗ್ಗೆ ಕಾಳಜಿ ವಹಿಸಿ, ಅವರಿಗೆ ಅಗತ್ಯವಿರುವ ಸಹಕಾರ ಮತ್ತು ರಕ್ಷಣೆಯನ್ನು ನೀಡುವ ಜವಾಬ್ದಾರಿಯನ್ನೂ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ನಮಗೆ ಬದುಕಲು ಅಗತ್ಯವಾದ ಗಾಳಿ, ನೀರು ಮತ್ತು ಜೀವನಾಡಿಯಾಗಿರುವ ಪರಿಸರವನ್ನು ಕಾಪಾಡುವುದು, ಗಿಡಮರಗಳನ್ನು ಬೆಳೆಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ರಕ್ಷಾಬಂಧನ ಎಂದರೆ ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ನಮ್ಮ ಕುಟುಂಬ, ಸಮಾಜ, ಮಹಿಳೆಯರು, ದೇಶ, ಸೈನಿಕರ ಕುಟುಂಬಗಳು ಹಾಗೂ ಪ್ರಕೃತಿಯ ರಕ್ಷಣೆಯ ಸಂಕಲ್ಪದ ಹಬ್ಬ” ಎಂಬ ವಿಶಿಷ್ಟ ಮತ್ತು ವಿಶೇಷವಾದ ಕಲ್ಪನೆಯೊಂದಿಗೆ ರಕ್ಷಾಬಂಧನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸಾಮಾಜಿಕ ಜವಾಬ್ದಾರಿ, ಪರಿಸರ ಪ್ರೀತಿ, ಮಹಿಳೆಯರ ರಕ್ಷಣೆ ಹಾಗೂ ಗೌರವ ಹಾಗೂ ಪರಸ್ಪರ ಸಹಕಾರದ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಇಂಚರ ಎಕೋ ಕ್ಲಬ್ ಚಿಗುರು ಇಕೋ ಕ್ಲಬ್ ಹಾಗೂ ಶಿವಾಜಿ ಫ್ರೆಂಡ್ಸ್ ಕ್ಲಬ್ ರಿ., ಬಳೆಂಜ ಇದರ ಅಧ್ಯಕ್ಷರಾದ ರಾಕೇಶ್ ಹೆಗಡೆ ಪ್ರಧಾನ ಕಾರ್ಯದರ್ಶಿಯಾದ ಯತೀಶ್ ದೇವಾಡಿಗ, ಸದಸ್ಯರಾದ ಗಣೇಶ್ ಸಂಭ್ರಮ , ವಿಶ್ವನಾಥ್ ಕುಲಾಲ್, ಡಿಕಯ್ಯ ಕುಲಾಲ್, ಯೋಗೀಶ್ ದೇವಾಡಿಗ, ಪ್ರಕಾಶ್ ಸಹಕರಿಸಿದರು.











