ಲಾಯಿಲ: ಮನುಷ್ಯ ಅನಾರೋಗ್ಯಕ್ಕೆ ತುತ್ತಾದಾಗ ಮೊದಲಿಗೆ ಔಷಧಿಯ ಮೊರೆ ಹೋದರೂ, ಸಂಕಷ್ಟದ ಸಂದರ್ಭದಲ್ಲಿ ಭಗವಂತನ ಮೊರೆ ಹೋಗುತ್ತಾನೆ. ಭಕ್ತನ ಭಕ್ತಿಗೆ ಒಲಿಯುವ ಭಗವಂತ ಪವಾಡ ಸದೃಶವಾಗಿ ಸಂಕಷ್ಟಗಳನ್ನು ನಿವಾರಿಸಿ ಆರೋಗ್ಯಪೂರ್ಣ ಬದುಕು ನೀಡುತ್ತಾನೆ. ಇದಕ್ಕೆ ನಮ್ಮ ಕಣ್ಣ ಮುಂದೆಯೇ ಸಾಕಷ್ಟು ಉದಾಹರಣೆಗಳಿವೆ ಎಂದು ಉಜಿರೆ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗೋಪಾಲಕೃಷ್ಣ ಹೇಳಿದರು.
ಅವರು ಆ.29ರಂದು ಲಾಯ್ಲ ಶ್ರೀ ರಾಘವೇಂದ್ರ ಮಠದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪ್ರಥಮ ದಿನದ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇವರಿಗೆ ಶರಣಾಗಲು ಭಕ್ತಿಗಿಂತ ಉತ್ತಮ ಮಾರ್ಗವಿಲ್ಲ. ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡುವುದೂ ಭಗವಂತನ ಸೇವೆಯೇ ಆಗಿದೆ. ಕಲಿಯುಗದಲ್ಲಿ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯ ನೀಡಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನುವಿನಂತಿರುವವರು ಗುರು ರಾಘವೇಂದ್ರರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ, ಮಠದಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಇಲ್ಲಿ ರಾಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ಜೀವನಾನುಭವ ಮತ್ತು ನಿಷ್ಕಲ್ಮಶ ಮನಸ್ಸಿನ ಸೇವೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ ಅವರ ನಿರಂತರ ಸೇವೆಯೂ ಅನನ್ಯವಾಗಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ರಾಯರ ಕೃಪೆಗೆ ಪಾತ್ರರಾಗುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾಮಣಿ ರಮಾನಂದ್ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶ್ರೀ ಮಠದ ಕುರಿತು ಅರ್ಥಪೂರ್ಣ ಭಕ್ತಿಗೀತೆ ರಚಿಸಿ, ರಾಗ ಸಂಯೋಜಿಸಿ ಗೀತೆಯ ರೆಕಾರ್ಡ್ ಬಿಡುಗಡೆ ಮಾಡಿದ ಮನು ಉಜಿರೆ ಅವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.
ಕೋಶಾಧಿಕಾರಿ ಶ್ರವಣ್ ರಾಜ್, ಟ್ರಸ್ಟಿಗಳಾದ ಸುಜಿತಾ ವಿ. ಬಂಗೇರ, ಜಿ. ಸೋಮೇಗೌಡ, ಡಾ. ಬಿ.ಎ. ಕುಮಾರ ಹೆಗ್ಡೆ, ಜಯರಾಮ ಬಂಗೇರ, ಪ್ರಧಾನ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ, ಡಾ. ಭಾರತಿ ಗೋಪಾಲಕೃಷ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಉಮಾ ರಾವ್, ಸುಶೀಲಾ ಎಸ್. ಹೆಗ್ಡೆ, ಗೌರವ ಸಲಹೆಗಾರ ಮಂಜುನಾಥ ರೈ, ವಿಶೇಷ ಆಹ್ವಾನಿತರಾದ ವಿಜಯ ರಾವ್, ಕೃಷ್ಣ ಶೆಟ್ಟಿ, ಜಯಂತ್, ಬಂಗಾರು ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ವಂದಿಸಿದರು.











