ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಪರಿಸರ ಸೂಕ್ಷ್ಮ ವಲಯ ಎಂಬ ಯೋಜನೆಯಿಂದ ಬೆಳ್ತಂಗಡಿ ತಾಲೂಕಿನ ಬಾಧಿತವಾಗುವ ಗ್ರಾಮಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿದ ಆ.31ರಂದು ಬೆಳ್ತಂಗಡಿ ಅಯ್ಯಪ್ಪ ಮಂದಿರದಿಂದ ತಾಲೂಕು ಕಛೇರಿ ವರೆಗೆ ಶಾಂತಿಯುತ ಮೆರವಣಿಗೆ ನಡೆದು ಬಳಿಕ ತಹಶೀಲ್ದಾರರಿಗೆ ಮನವಿ ನೀಡಲಾಯಿತು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮಾತನಾಡಿ, ಶತಮಾನಗಳಿಂದ ವಂಶ ಪಾರಂಪರಿಕವಾಗಿ ಕೃಷಿಯನ್ನೆ ಮೂಲ ಆದಾಯವಾಗಿ ಸಂಸಾರ ಸಮೇತವಾಗಿ ವಾಸವಾಗಿರುವವರು ರೈತ ವರ್ಗದವರು. ಸರಕಾರ ನಮ್ಮ ಒಪ್ಪಿಗೆ ಪಡೆಯದೆ, ಮನದಟ್ಟು ಮಾಡದೆ ಏಕಾಏಕಿ ಕಾನೂನು ಜಾರಿ ಮಾಡಿರುವುದು ತಪ್ಪು. ಕಸ್ತೂರಿ ರಂಗನ್ 2014ರ ವರದಿಯನ್ನು ಪುನರ್ ಪರಿಶೀಲನೆ ಮಾಡುವ ತನಕ ಜಾರಿಗೊಳಿಸಲೇ ಬಾರದು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ 2014ರ ವರದಿಯನ್ನು ಪುನರ್ ಪರಿಶೀಲನೆ ಮಾಡುವ ಕುರಿತಾತ ಮನವಿಯ ಜೊತೆಗೆ ರೈತರಿಗೆ ಕೋವಿ ಪರವಾನಿಗೆ ಮಂಜೂರು ಮಾಡುವ ಕುರಿತು, ಹಾಗೂ ಕಾಡು ಪ್ರಾಣಿಗಳ ಹಾವಳಿಗಳಿಂದ ರೈತರ ಜೀವಹಾನಿ, ಬೆಳೆನಾಶವಾಗುತ್ತಿದ್ದು, ರಾಜ್ಯ ಸರಕಾರದಿಂದ ರೈತರಿಗೆ ಸೂಕ್ತರಕ್ಷಣೆಗಾಗಿ ಮತ್ತು ಪರಿಹಾರಗಳ ವ್ಯವಸ್ಥೆ ನೀಡುವಂತೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಂಬುಜಾಕ್ಷ, ರಾಮ್ಪ್ರಸಾದ್, ಶಾಂಭವಿ, ಎಸ್ಆರ್ ಭಾಸ್ಕರ್ ಸಾಲಿಯಾನ್, ಜಯಣ್ಣ, ಶಿವಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.











