ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಯ ಸಭೆ ನಡೆಯಿತು. ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಮಕ್ಕಳ ಆರೈಕೆ, ಸುರಕ್ಷತೆ, ಚಿಕಿತ್ಸಾ ಸೇವೆಗಳು ಹಾಗೂ ಶಾಲಾ ಆಡಳಿತಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಚಿಕಿತ್ಸಾ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು, ಶಿಕ್ಷಕರು ತಮ್ಮ ತರಗತಿಯ ಮಕ್ಕಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ರಜೆಯ ಸಂದರ್ಭದಲ್ಲಿ ಪರ್ಯಾಯ ಶಿಕ್ಷಕರಿಗೆ ಜವಾಬ್ದಾರಿ ಹಸ್ತಾಂತರಿಸುವ ಕುರಿತು ಸೂಚಿಸಲಾಯಿತು.
ಊಟದ ಸಮಯದಲ್ಲಿ ಮಕ್ಕಳ ಮೇಲೆ ಸೂಕ್ತ ನಿಗಾ ವಹಿಸುವುದು, ಮಕ್ಕಳ ಸ್ವಚ್ಛತೆ ಹಾಗೂ ವೈಯಕ್ತಿಕ ಆರೈಕೆಗೆ ಗಮನ ನೀಡುವುದು ಮತ್ತು ಶಾಲಾ ಬಸ್ನಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವುದು–ಕಳುಹಿಸುವುದರ ಬಗ್ಗೆ ಸಿಬ್ಬಂದಿಗೆ ಜವಾಬ್ದಾರಿಗಳನ್ನು ನೆನಪಿಸಲಾಯಿತು.
ಪ್ರತಿದಿನ ಸ್ಟಾಫ್ ಮೀಟಿಂಗ್/ಸ್ಟಾಫ್ ಚರ್ಚೆ ನಡೆಸಿ, ಮಕ್ಕಳ ಶೈಕ್ಷಣಿಕ ಪ್ರಗತಿ, ವರ್ತನೆ ಹಾಗೂ ಅಗತ್ಯತೆಗಳ ಕುರಿತು ಪರಸ್ಪರ ಚರ್ಚಿಸುವಂತೆ ತಿಳಿಸಲಾಯಿತು. ಮಕ್ಕಳಿಗೆ ನೀಡಲಾಗುವ ಫಿಸಿಯೋಥೆರಪಿ ಹಾಗೂ ಇತರ ಚಿಕಿತ್ಸಾ ಸೇವೆಗಳ ವೇಳಾಪಟ್ಟಿಯನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಚಿಕಿತ್ಸಾ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು.
ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ವಿಶೇಷ ಗಮನ ಅಗತ್ಯವಿರುವ ವಿಚಾರಗಳನ್ನು ತಕ್ಷಣವೇ ಮುಖ್ಯಸ್ಥರ ಗಮನಕ್ಕೆ ತರುವಂತೆ ಸೂಚಿಸಲಾಯಿತು. ಪೋಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಮಕ್ಕಳ ಪ್ರಗತಿ ಮತ್ತು ಅಗತ್ಯತೆಗಳ ಕುರಿತು ನಿರಂತರವಾಗಿ ಸಹಕರಿಸುವಂತೆ ಶಿಕ್ಷಕರಿಗೆ ತಿಳಿಸಲಾಯಿತು.
ಸಭೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿಯುತ ಸಹಕಾರವೇ ವಿಶೇಷ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪ್ರಮುಖ ಆಧಾರ ಎಂಬ ಆಶಯದೊಂದಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಂಡರು.











