ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣದ ವ್ಯಾಪ್ತಿಯ ತಾಲೂಕು ಕಚೇರಿಯಿಂದ ಕೋರ್ಟ್ಗೆ ಹೋಗುವ ರಸ್ತೆಯಲ್ಲಿ ರಸ್ತೆ ಬದಿ ಕುಸಿದು ನಿರ್ಮಾಣವಾದ ಗುಂಡಿಯನ್ನು ಪಟ್ಟಣ ಪಂಚಾಯತದಿಂದ ಮುಚ್ಚಿ ವಾಹನ ಸಂಚಾರಕ್ಕೆ ಸುಗಮಗೊಳಿಸಲಾಗಿದೆ.
ಕೋರ್ಟು ರಸ್ತೆಯ ಎರಡು ಬದಿಗೆ ರಸ್ತೆ ಕುಸಿತವಾಗಿ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯ ಉಂಟಾಗಿತ್ತು. ಒಂದು ಬದಿಯ ಗುಂಡಿಯನ್ನು ಪಂಚಾಯತು ವತಿಯಿಂದ ಈ ಹಿಂದೆ ಮುಚ್ಚಿ ಸರಿಪಡಿಸಲಾಗಿತ್ತು. ಇನ್ನೊಂದು ಬದಿಯ ಗುಂಡಿಯೂ ಇತ್ತಿಚೇಗೆ ಸುರಿದ ಮಳೆಗೆ ಕುಸಿತಕ್ಕೊಳಗಾಗಿ ಅಪಾಯವನ್ನು ತಂದೊಡ್ಡಿತ್ತು. ಇದರ ಬಗ್ಗೆ ಸುದ್ದಿ ಉದಯ ಆನ್ಲೈನ್ ನ್ಯೂಸ್ನಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಜೊತೆಗೆ ಕೆಡಿಪಿ ಸದಸ್ಯ ಹಾಗೂ ಪಟ್ಟಣ ಪಂಚಾಯತು ಮಾಜಿ ಸದಸ್ಯ ಜಗದೀಶ್ ಡಿ. ಇದರ ದುರಸ್ತಿಗೆ ಪಂಚಾಯತಕ್ಕೆ ಮನವಿ ನೀಡಿದ್ದರು. ಪಂಚಾಯತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇದೀಗ ಪಟ್ಟಣ ಪಂಚಾಯತು ವತಿಯಿಂದ ರಸ್ತೆ ಕುಸಿತದ ಹೊಂಡಕ್ಕೆ ಕಲ್ಲು ತುಂಬಿಸಿ ದುರಸ್ತಿಗೊಳಿಸಿದ್ದಾರೆ.











