29.9 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಪರಂಪರಾ ಟು ಪ್ರಗತಿ’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಗಣಿತಶಾಸ್ತ್ರ ವಿಭಾಗವು ಕಾಲೇಜಿನ ಐಕ್ಯೂಎಸಿ ವಿಭಾಗದ ಸಹಭಾಗಿತ್ವದಲ್ಲಿ ಸಮ್ಯಗ್ದರ್ಶನ ಸಭಾಂಗಣದಲ್ಲಿ ‘ಪರಂಪರಾ ಟು ಪ್ರಗತಿ’ ವಿಕಸಿತ ಭಾರತದ ನಿರ್ಮಾಣದಲ್ಲಿ ಭಾರತೀಯ ಗಣಿತ ಮತ್ತು ವಿಜ್ಞಾನ ಜ್ಞಾನ ಪರಂಪರೆಯ ಪಾತ್ರ ವಿಚಾರದ ಕುರಿತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾರ್ಗದರ್ಶನದಲ್ಲಿ ಆಯೋಜಿಸಿರುವ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರೀಯ ವಿಚಾರ ಸಂಕಿರಣವನ್ನು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರೊಫೆಸರ್ ಹಾಗು ಹಿರಿಯ STEM ಮಾರ್ಗದರ್ಶಕ ಡಾ.ಅಜಿತ್ ಹೆಬ್ಬಾರ್ ಹೊಸ್ಮಠ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಭಾರತೀಯ ಜ್ಞಾನ ಪರಂಪರೆಯಲ್ಲಿ ಗಣಿತ ಮತ್ತು ವಿಜ್ಞಾನದ ಮಹತ್ವವನ್ನು ವಿವರಿಸಿ, ಗಣಿತವು ಕೇವಲ ಒಂದು ವಿಷಯವಲ್ಲ, ಅದು ಪ್ರಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಕೃತಿಯಲ್ಲಿ ಕಂಡುಬರುವ ಪ್ರತಿಯೊಂದು ಚಲನೆ, ವಿನ್ಯಾಸ, ಕ್ರಮ ಹಾಗೂ ಸಮತೋಲನದ ಹಿಂದೆ ಗಣಿತದ ತತ್ವಗಳು ಅಡಗಿವೆ. ಆದ್ದರಿಂದ ಗಣಿತವನ್ನು ಕಠಿಣ ವಿಷಯವೆಂದು ಪರಿಗಣಿಸದೆ, ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿ ನೋಡಬೇಕು ಎಂದು ಹೇಳಿದರು.

ಭಾರತೀಯ ಜ್ಞಾನ ಪರಂಪರೆಯಲ್ಲಿ ಗಣಿತ ಮತ್ತು ವಿಜ್ಞಾನವು ಪ್ರಕೃತಿಯ ಅವಲೋಕನದಿಂದಲೇ ಬೆಳವಣಿಗೆಯಾಗಿದೆ. ನಮ್ಮ ಋಷಿಮುನಿಗಳು ಹಾಗೂ ಪ್ರಾಚೀನ ವಿಜ್ಞಾನಿಗಳು ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸಿ, ಅದರಲ್ಲಿರುವ ನಿಯಮಗಳನ್ನು ಅರಿತು ಗಣಿತ ಮತ್ತು ವೈಜ್ಞಾನಿಕ ಜ್ಞಾನವನ್ನು ಅಭಿವೃದ್ಧಿಪಡಿಸಿದರು. ಇಂತಹ ಭಾರತೀಯ ಜ್ಞಾನ ಸಂಪತ್ತನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಗತ್ಯವಾಗಿದ್ದು, ವಿಕಸಿತ ಭಾರತದ ನಿರ್ಮಾಣದಲ್ಲಿ ಈ ಪರಂಪರೆಯ ಜ್ಞಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಗಣಿತವು ಕೇವಲ ಸೂತ್ರಗಳು, ಸಮೀಕರಣಗಳು ಅಥವಾ ಅಂಕಿ-ಅಂಶಗಳಿಗೆ ಸೀಮಿತವಾದ ವಿಷಯವಲ್ಲ ಅದು ಚಿಂತನೆಯ ಒಂದು ವಿಧಾನ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ತಾರ್ಕಿಕತೆಯನ್ನು ಬೆಳೆಸುವ ಸಾಧನ. ಇಂದಿನ ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ವಿಜ್ಞಾನ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳ ಅಭಿವೃದ್ಧಿಗೆ ಗಣಿತವು ಮೂಲಾಧಾರವಾಗಿದ್ದು, ತಂತ್ರಜ್ಞಾನ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲಿಯೂ ಅದರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಇಂತಹ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸ ಜ್ಞಾನ, ಚಿಂತನೆಗಳು ಮತ್ತು ಸಂಶೋಧನಾ ದೃಷ್ಟಿಕೋನಗಳನ್ನು ಒದಗಿಸುತ್ತವೆ. ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ಸಂಶೋಧನಾ ಪ್ರಬಂಧಗಳು, ಚರ್ಚೆಗಳು ಮತ್ತು ತಜ್ಞರ ಅಭಿಪ್ರಾಯಗಳ ಆಧಾರದ ಮೇಲೆ ರೂಪುಗೊಳ್ಳುವ ಶಿಫಾರಸುಗಳನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗುವುದು. ಈ ಶಿಫಾರಸುಗಳು ‘ವಿಕಸಿತ ಭಾರತ’ದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಯೋಜನೆಗಳು ಹಾಗೂ ಕಾರ್ಯತಂತ್ರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಲಿವೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ, ಅತಿಥಿಗಳಾದ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಡಾ.ವೆಂಕಟೇಶ್ವರ ಪೈ ಆರ್., ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಹರ್ಷ ಎ.ಜೆ. ರವರನ್ನು ಕಾಲೇಜು ಹಾಗೂ ವಿಭಾಗದ ವತಿಯಿಂದ ಪ್ರೊ. ವಿಶ್ವನಾಥ್ ಪಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಹಾಗು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಪ್ರೊ ಗಣೇಶ್ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ನಂದ ಕುಮಾರಿ, ಆಡಳಿತ ಕುಲಸಚಿವ ಪ್ರೊ. ಶ್ರೀಧರ ಎನ್ ಭಟ್ಟ, ಐಕ್ಯೂಎಸಿ ಸಂಯೋಜಕ ಪ್ರೊ ಗಜಾನನ ಆರ್ ಭಟ್ಟ, ಸ್ನಾತಕೋತ್ತರ ಪದವಿ ಕೇಂದ್ರದ ಡೀನ್ ಡಾ. ಸೌಮ್ಯ ಬಿ ಪಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧಕರು ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗು ಸಿಬ್ಬಂದಿಗಳು ಭಾಗಿಯಾಗಿದ್ದರು. ಮುಖ್ಯಸ್ಥ ಪ್ರೊ ಗಣೇಶ್ ನಾಯಕ್ ಬಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ದೀಕ್ಷಿತ್ ನಿರೂಪಿಸಿ, ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ಅಕ್ಷತಾ ಬಿ ವಂದಿಸಿದರು. ಉಪನ್ಯಾಸಕಿ ನಿಶ್ಮಿತಾ ಎಮ್ ಸಹಕರಿಸಿದರು.

Related posts

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಪೆರಾಡಿ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕದಿರು (ತೆನೆ) ಹಬ್ಬ 

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಪುಂಜಾಲಕಟ್ಟೆ ಉಳಿ ಯುವಕ ಮಂಡಲದಿಂದ ಭಜನಾ ತರಬೇತಿ ಕಾರ್ಯಗಾರ

Suddi Udaya

ಬೆಳ್ತಂಗಡಿ : ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಮೂರನೇ ಬಾರಿ ಮೆಡಿಕಲ್ ಟೆಸ್ಟ್

Suddi Udaya
error: Content is protected !!