ಮಂಗಳೂರು: ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆಗಾಗಿ ಭಾರತೀಯ ಮಜ್ದೂರು ಸಂಘ (BMS) ವತಿಯಿಂದ ಆಗಸ್ಟ್ 17ರಂದು ದೇಶಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಹತ್ವದ ಫಲಶ್ರುತಿ ದೊರೆತಿದೆ ಎಂದು BMS ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.

ಆಗಸ್ಟ್ 17ರ ಪ್ರತಿಭಟನೆಯ ಸಂದರ್ಭದಲ್ಲಿ ಸಲ್ಲಿಸಲಾದ ಮನವಿಯ ಮುಂದುವರಿದ ಭಾಗವಾಗಿ, ಸೆ.1ರಂದು BMS ಅಖಿಲ ಭಾರತ ನಾಯಕತ್ವದ ನಿಯೋಗವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಹಾಗೂ ವಿವಿಧ ಪ್ರಮುಖ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಮಾತುಕತೆ ನಡೆಸಿತು.
BMS ಅಖಿಲ ಭಾರತ ಅಧ್ಯಕ್ಷ ಎಸ್. ಮಲ್ಲೇಶಂ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ, ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್, ಮಾಜಿ ಅಖಿಲ ಭಾರತ ಅಧ್ಯಕ್ಷರಾದ ಹಿರಣ್ಯ ಪಾಂಡ್ಯ ಹಾಗೂ ಸಂಜಿ ನಾರಾಯಣ್ ನಿಯೋಗದಲ್ಲಿದ್ದರು.
ಸಭೆಯಲ್ಲಿ EPF, ESI ಹಾಗೂ ಬೋನಸ್ ವೇತನ ಮಿತಿಗಳ ಹೆಚ್ಚಳ, 300 ಕಾರ್ಮಿಕರ ಮಿತಿಯನ್ನು 100ಕ್ಕೆ ಇಳಿಸುವುದು, Fixed Term Employmentಗೆ ನಿಯಂತ್ರಣ, ಉದ್ಯೋಗ ಭದ್ರತೆ, ಕಾರ್ಮಿಕ ಸಂಘಗಳ ಮಾನ್ಯತೆ ಮತ್ತು ನೋಂದಣಿಯಲ್ಲಿ ಸುಧಾರಣೆ, ‘Worker’ ವ್ಯಾಖ್ಯಾನದಲ್ಲಿ ತಿದ್ದುಪಡಿ ಹಾಗೂ ಮುಷ್ಕರದ ಹಕ್ಕಿಗೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು.
ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಸೇರಿದಂತೆ BMS ಮುಂದಿಟ್ಟ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳನ್ನು ಶೀಘ್ರದಲ್ಲೇ ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ Occupational Safety, Health and Working Conditions Code ಕುರಿತು BMS ಕೇಂದ್ರ ನಾಯಕತ್ವ ಮತ್ತು ಕೇಂದ್ರ ಕಾರ್ಮಿಕ ಸಚಿವರ ನಡುವೆ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.
“ಆಗಸ್ಟ್ 17ರ ರಾಷ್ಟ್ರವ್ಯಾಪಿ ಹೋರಾಟವು ಕಾರ್ಮಿಕರ ಧ್ವನಿಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ದೊರೆತಿರುವ ಭರವಸೆ ನಮ್ಮ ಸಂಘಟಿತ ಹೋರಾಟದ ಫಲಶ್ರುತಿ. ಕಾರ್ಮಿಕರ ಹಿತಾಸಕ್ತಿಗಾಗಿ BMS ಹೋರಾಟ ನಿರಂತರವಾಗಿ ಮುಂದುವರಿಯಲಿದೆ,” ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.












