ಶಿಶಿಲ: ಶ್ರೀ ಕೃಷ್ಣನು ದ್ವಾಪರಯುಗದಲ್ಲಿ ಉಪದೇಶ ಮಾಡಿದ ಭಗವದ್ಗೀತೆಯಲ್ಲಿನ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು ಬದುಕಿನ ನಾಲ್ಕು ಹಂತಗಳಲ್ಲಿ ಕೂಡಾ ಹೇಗೆ ಬದುಕಬೇಕನ್ನುವುದನ್ನು ತಿಳಿಸಿದ್ದಾರೆ. ಭಗವದ್ಗೀತೆಯನ್ನು ಓದುವ ಅಭ್ಯಾಸ ಹೆಚ್ಚಾಗಲಿ ಎಂದು ಶ್ರೀಮತಿ ರಾಜಲಕ್ಷ್ಮಿ ಕೋಡಿಬೆಟ್ಟು ತಿಳಿಸಿದರು.
ಅವರು ಶಿಶಿಲದ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಆಶ್ರಯದಲ್ಲಿ ನಡೆದ 29ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಲ್ಲೆಡೆ ಸಾಮಾಜಿಕ ಜಾಲತಾಣದ ಪಾರಮ್ಯ ಮೆರೆಯುತ್ತಿರುವ ಸಂದರ್ಭದಲ್ಲಿ ಹತ್ತು ತಾಯಮಕ್ಕಳು ಒಂದೇ ತಾಯಮಕ್ಕಳಂತೆ ಒಗ್ಗಟ್ಟಾಗಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಯಶಸ್ವಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯೆ ಶ್ರೀಮತಿ ವಿಮಲಾ ಎಳ್ಳುಮಜಲು, ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೀಪ್ ಅಮುಡಂಗೆ ಉಪಸ್ಥಿತರಿದ್ದರು.
ಬೆಳಿಗ್ಗೆ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ ಕಾರ್ಯಕ್ರಮ ಉದ್ಘಾಟಿಸಿದರು. ಕೆಸರಿನಲ್ಲಿ ಹಗ್ಗ ಜಗ್ಗಾಟ ಹಾಗೂ ಅಟ್ಟಿ ಮಡಿಕೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಪುಟಾಣಿಗಳಿಗೆ ಶ್ರೀ ಕೃಷ್ಣವೇಷ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ ಕಾಡುಮರಗಳ ಎಲೆ ಗುರುತಿಸುವ ವಿಶಿಷ್ಟ ಸ್ಪರ್ಧೆ ನಡೆಯಿತು.
ಮಧ್ಯಾಹ್ನ ನೃತ್ಯಭೂಷಿಣಿ ಕಲಾ ಶಾಲೆ ಶಿಶಿಲ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ,ಅಂಗನವಾಡಿ ,ಹೇವಾಜೆ ಕಿ.ಪ್ರಾ.ಶಾಲೆ ಹಾಗೂ ವಾಲ್ಮೀಕಿ ಆಶ್ರಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶ್ರೀ ದುರ್ಗಾಪರಮೇಶ್ವರಿ ಯಕ್ಷ ಕಲಾ ಕೇಂದ್ರ ಶಿಶಿಲ ಇದರ ಸದಸ್ಯರಿಂದ ಪರಂಪರೆಯ ಹನುಮನ ಒಡ್ಡೋಲಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕಗಳನ್ನು ಪಡೆದ ಹನ್ನೊಂದು ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಶಿಶಿಲ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಇಪ್ಪತ್ನಾಲ್ಕು ವರುಷ ಸೇವೆ ಸಲ್ಲಿಸಿದ ಶ್ರೀಮತಿ ಸುಜಾತ ಹಾಗೂ ಜನಪದ ಕಲಾವಿದೆ ಮತ್ತು ನಾಟಿ ಚಿಕಿತ್ಸೆ ನೀಡುವ ಶ್ರೀಮತಿ ಚೆನ್ನಮ್ಮ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಪವನ್ ಗೌರೀಶ ಹಾಗೂ ರಂಜಿತ್ ವಾಚಿಸಿದರು.ಅಭಿನಂದನಾ ಪತ್ರವನ್ನು ಪ್ರಖ್ಯಾತ್ ವಾಚಿಸಿದರು.ನಿತಿನ್ ಬೈರಕಟ್ಟ ಸ್ವಾಗತಿಸಿ ಸುಂದರ ಕೆ.ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಮೇಶ್ ಕೊಳಂಬೆ ಧನ್ಯವಾದ ಸಮರ್ಪಿಸಿದರು. ಸತೀಶ್ ಬೆದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸರ್ವಸದಸ್ಯರು ಸಹಕರಿಸಿದರು.












