ಉಜಿರೆ: ಇಲ್ಲಿನ ಪ್ರಗತಿ ಯುವಕ ಮಂಡಲ(ರಿ) ಮಾಚಾರು, ಶ್ರೀ ಪ್ರಗತಿ ಮಹಿಳಾ ಮಂಡಲ ಹಾಗೂ ಶ್ರೀಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ 34ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ ಕಾರ್ಯಕ್ರಮವನ್ನು ಶ್ರೀಮತಿ ಗುಣವತಿ ಬಟ್ಟಾಜೆ ಉದ್ಘಾಟಿಸಿ ಶುಭ ಹಾರೈಸಿದರು. ನಂತರ ಮಕ್ಕಳು, ಮಹಿಳೆಯರು, ಪುರುಷರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ತೀರ್ಪುಗಾರರಾಗಿ ಮೋಹನ್ ಗೌಡ, ಪ್ರಜ್ವಲ್ ಜೈನ್, ಶಾಲಾ ಶಿಕ್ಷಕಿಯರಾದ ಶ್ರೀಮತಿ ವೈಶಾಲ್ಯ ಮತ್ತು ಮಮತಾ ಸಹಕರಿಸಿದರು.

ಈ ವೇಳೆ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಆಗಮಿಸಿ ಶುಭಕೋರಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಪಿತಾಂಬರ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬದನಾಜೆ ಶಾಲಾ ಸಹಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಮಾತನಾಡಿ,’ಶ್ರೀ ಕೃಷ್ಣನ ಜೀವನವೇ ನಮಗೆ ಆದರ್ಶ. ಅವನ ಹುಟ್ಟಿನಿಂದ ಸಾವಿನ ವರೆಗು ನಡೆದ ಎಲ್ಲಾ ಘಟನೆಗಳು ನಮ್ಮ ಬದುಕಿಗೆ ಪಾಠ. ಗೀತೆಯ ಮೂಲಕ ನಮ್ಮ ಜೀವನ ಹೇಗಿರಬೇಕು ಎಂದು ತಿಳಿಸಿದ ಕೃಷ್ಣನ ಗೀತೊಪದೇಶವನ್ನು ಈಗಿನ ಯುವಜನತೆ ಅರ್ಥ ಮಾಡಿಕೊಂಡರೆ ಜೀವನವನ್ನು ಸುಂದರ ಮತ್ತು ಮೌಲ್ಯಯುತ ಮಾಡಬಹುದೆಂದರು.

ಉಜಿರೆ ಜೆಸಿಐ ಸಿಟಿ ಅಧ್ಯಕ್ಷರಾದ ಮೊಹಮ್ಮದ್ ಮಿರ್ಷಾದ್ ಮಾತನಾಡಿ,’ ಮಾಚಾರಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಂಬ ಬೇಧ ಇಲ್ಲದೇ ಕಳೆದ 33 ವರ್ಷಗಳಿಂದ ಸೌಹಾರ್ದತೆ ಯಿಂದ ಅಷ್ಟಮಿ ಆಚರಣೆಯನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮೆಲ್ಲರ ರಕ್ತ ಒಂದೇ, ನಮ್ಮೆಲ್ಲರ ಮಣ್ಣು ಒಂದೇ, ನಮ್ಮೆಲ್ಲರ ದೇಶ ಒಂದೇ, ಆದ್ದರಿಂದ ಪರಸ್ಪರ ಸಹೋದರರಂತೆ ಬಾಳಬೇಕೆಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ಊರಿನ ಶಾಲೆ, ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ದುಡಿಯುವ ರಮೇಶ್ ‘ಬೊಳ್ಳಿ’ ಪಡ್ಪು ಇವರಿಗೆ ‘ಪ್ರಗತಿ ಸಮ್ಮಾನ-2026’ ನೀಡಿ ಗೌರವಿಸಲಾಯಿತು.ಮೋಹನ್ ಹೆಚ್. ಬಿ. ಇದನ್ನು ನಿರ್ವಹಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಸಾಜಿ ಜೋಸೆಫ್ ಮಾಡತ್ತಿಲ್, ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಪಾಲೆಂಜ, ದಿಲೀಪ್ ಕುಮಾರ್ , ಗೋಪಾಲಕೃಷ್ಣ ಉಪಾಧ್ಯಾಯ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಅನಿಲ್ ಡಿಸೋಜಾ, ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಗೋಪಾಲ್, ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್ ಮತ್ತು ಪ್ರೌಢಶಾಲೆಯ ವಿಠ್ಠಲ್ ನಾಯ್ಕ್,ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಯ್ಯ ಗೌಡ, ಶಾಲಾ ಹಿರಿಯ ವಿದ್ಯಾರ್ಥಿ ಅಕ್ಬರ್ ಅಲಿ ಬದ್ರಿಯಾ ಬಂಡಸಾಲೆ ಉಪಸ್ಥಿತರಿದ್ದರು.
ಅಗಲಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಖಿಲ್ ಕುಮಾರ್ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ರಿನ್ಸ್ ಶಿಬಿ ಯವರಿಗೆ ಮೌನ ಪ್ರಾರ್ಥನೆ ಮಾಡಲಾಯಿತು. ಸುಜ್ಞಾನನಿಧಿ ಯೋಜನೆ ಸಂಚಾಲಕರಾದ ಸುಂದರ ಬಂಗೇರ, ಸಹ ಸಂಚಾಲಕ ಸೋಮಶೇಖರ್ ಕೆ, ಯುವಕ ಮಂಡಲದ ಕೋಶಾಧಿಕಾರಿ ಸಂತೋಷ್ ಗೌಡ ಸೇರಿದಂತೆ ಸದಸ್ಯರು ಸಹಕರಿಸಿದರು.
ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿಕ್ಷಕ ಸುರೇಶ್ ಮಾಚಾರ್ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಶ್ರದ್ಧಾ ಪ್ರಾರ್ಥನೆ ಮಾಡಿದರು. ಯುವಕ ಮಂಡಲದ ಕಾರ್ಯದರ್ಶಿ ಅಕ್ಷಯ್ ಸ್ವಾಗತಿಸಿ, ಬಹುಮಾನ ವಿಜೇತರ ಪಟ್ಟಿಯನ್ನು ಜೊತೆ ಕಾರ್ಯದರ್ಶಿ ಯೋಗೀಶ್ ವಾಚಿಸಿದರು. ಶ್ರೀ ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ನವೀನ ವಂದಿಸಿದರು.












