ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಮಕ್ಕಳಿಗೆ ಉಚಿತ ಗುರುತಿನ ಚೀಟಿ ವಿತರಣಾ ಸಮಾರಂಭವು ಸೆ.11 ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಕೊಡುಗೈ ದಾನಿಗಳೂ, ಸಮಾಜ ಸೇವಕರೂ, ಮಂಜುನಾಥ ಸ್ವಾಮಿ ದೇವಸ್ಥಾನದ ಪಾರುಪತ್ಯಗಾರರೂ ಆದ ಲಕ್ಷ್ಮೀನಾರಾಯಣ ರಾವ್ ಇವರು ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಗುರುತಿನ ಚೀಟಿಯನ್ನು ಪ್ರತಿ ವರ್ಷ ಕೊಡುತ್ತಾ ಬರುತ್ತಿದ್ದು ಈ ವರ್ಷವೂ ಕೂಡ ವಿತರಣೆ ಮಾಡಿ ‘ಮಕ್ಕಳು ಬಾಲ್ಯದಿಂದಲೇ ಜವಾಬ್ದಾರಿಯುತವಾಗಿ ತಮ್ಮ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾ ಬಂದರೆ ಮುಂದೆ ಒಳ್ಳೆಯ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ’ ಎಂದು ಕಿವಿಮಾತು ನೀಡಿದರು.
ಎಸ್.ಡಿಎಂ ಡಿ.ಎಡ್ ಕಾಲೇಜಿನ ಪ್ರಾಧ್ಯಾಪಕರಾದ ಮಂಜು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವ ಶ್ರೀಯುತರು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಶಾಲೆಯ ಮೇಲೆ ಅಪಾರ ಅಭಿಮಾನವನ್ನು ಹೊಂದಿರುತ್ತಾರೆ. ಇವರ ಈ ಸೇವೆಗೆ ನಾವೆಲ್ಲರೂ ಚಿರಋಣಿಗಳಾಗಿದ್ದೇವೆ ಎಂದರು.
ಶಾಲಾ ಶಿಕ್ಷಕ ಜೋಸೆಫ್ ಸ್ವಾಗತಿಸಿದ ಈ ಕಾರ್ಯಕ್ರಮಕ್ಕೆ ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕಿ ಸೀಮಾ ಕಾರ್ಯಕ್ರಮವನ್ನು ನಿರ್ವಹಿಸಿದರು.












