ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ ಇಲ್ಲಿಯ ಅಂತಿಮ ಸೆಮಿಸ್ಟರ್‌ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಡಿ ಜೈನ್ ಇವರು 2022-23 ರ ಸಾಲಿನಲ್ಲಿ ರಾಷ್ಟ್ರೀಯ  ಕೃಷಿ ಉನ್ನತ ಶಿಕ್ಷಣ ಯೋಜನೆಯ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಆಯ್ಕೆಯಾಗಿ ಸಂಸ್ಥೆ ಹಾಗೂ ರಾಜ್ಯ ಮತ್ತು ದೇಶಕ್ಕೆ ಹೆಸರು ತಂದಿರುತ್ತಾರೆ. ಮೂರು ತಿಂಗಳು ಕಾಲ ಜರ್ಮನಿಯ ಟ್ಯೂಬಿಂಗನ್ನಲ್ಲಿರುವ ಎಬರ್ಹಾರ್ಡ ಕಾರ್ಲ್ಸ ಮಹಾವಿಶ್ವವಿದ್ಯಾಲಯದಲ್ಲಿ ಉಚಿತ ತರಬೇತಿ ಹಾಗೂ ಇಂಟರ್ನ್ಶಿಪ್‌ಗಾಗಿ ತೆರಳಿದ್ದು ಸರಕಾರವೇ ಇದರ ಸಂಪೂರ್ಣ ವೆಚ್ಚವನ್ನು ಭರಿಸಿರುತ್ತದೆ. 
ಇವರು ರಾಷ್ಟ್ರೀಯ ಸೇವಾ ಯೋಜನೆ ಘಟಕ ಮೂಡಿಗೆರೆಯ ಪ್ರತಿನಿಧಿಯಾಗಿ ಕಾಲೇಜು ಹಂತದಲ್ಲಿ ಆಯ್ಕೆಗೊಂಡ ಬಳಿಕ ಶಿವಮೊಗ್ಗ ಕೃಷಿ & ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿ 32 ವಿದ್ಯಾರ್ಥಿಗಳಲ್ಲಿ ಓರ್ವಳಾಗಿ ಆಯ್ಕೆಗೊಂಡು, ಮುಂದಕ್ಕೆ ತಮಿಳುನಾಡಿನ ತಿರುಚಿರಾಪಳ್ಳಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆದ 10 ದಿನಗಳ ದಕ್ಷಿಣ ವಲಯ ಪೂರ್ವ ಗಣರಾಜ್ಯೋತ್ಸವದ ಶಿಬಿರದಲ್ಲಿ ಭಾಗವಹಿಸಿದ್ದು,  ಇದರಲ್ಲಿ ಒಟ್ಟು 7 ವಿದ್ಯಾರ್ಥಿಗಳ ಆಯ್ಕೆಯಾದವರಲ್ಲಿ ಈಕೆ ರಾಜ್ಯದಲ್ಲಿ ಮೊದಲ ಸ್ಥಾನಿಯಾಗಿ ಆಯ್ಕೆಗೊಂಡು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡಿನಲ್ಲಿ ಭಾಗವಹಿಸಿ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಪ್ರಧಾನಿಮಂತ್ರಿಯವರಿಂದ ಪ್ರಶಂಶಾಪತ್ರ ಪಡೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುತ್ತಾರೆ.
ಇವರ ರಾಷ್ಟ್ರಮಟ್ಟದವರೆಗಿನ ಸಾಧನೆಗೆ ಸಲಹೆ ಸೂಚನೆ ಮಾರ್ಗದರ್ಶನವನ್ನು ಸಂಸ್ಥೆಯ ಡೀನ್ ಆಗಿರುವ ಡಾ. ನಾರಾಯಣ ಎಸ್. ಮಾರ್ವರ್ಕರ್ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿಯಾದ ಯೆಲ್ಲೇಶ್ ಕುಮಾರ್ ಹೆಚ್.ಎಸ್‌ರವರು ತರಬೇತಿಯನ್ನು ನೀಡಿ, ಸಂಸ್ಥೆಯ ಉಪನ್ಯಾಸಕ ಬಳಗ ಪ್ರೋತ್ಸಾಹವನ್ನು ನೀಡಿರುತ್ತಾರೆ. 
ಇವರು ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಸೆಕೆಂಡರಿ ವಿಭಾಗದ ಸಹಶಿಕ್ಷಕ ಧರಣೇಂದ್ರ ಕೆ ಹಾಗೂ ಅನುಪಮ ದಂಪತಿಗಳ ಪುತ್ರಿಯಾಗಿರುತ್ತಾರೆ.

Leave a Comment

error: Content is protected !!