ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

Suddi Udaya

ಉಜಿರೆ: ವೃತ್ತಿಪರ ಒತ್ತಡ ಮತ್ತು ದೈನಂದಿನ ಸಮಸ್ಯೆಗಳ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಂನ ಮನಃಶಾಸ್ತ್ರಜ್ಞೆ ಪೂಜಾ ಡಿ.ಜಿ ಅಭಿಪ್ರಾಯಪಟ್ಟರು.

ಉಜಿರೆ ಎಸ್ ಡಿ ಎಂ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ವಿಭಾಗವು ‘ವಿಶ್ವ ಸ್ಕಿಜೋಫ್ರೇನಿಯಾ ದಿನ’ದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮಾನಸಿಕ ಖಿನ್ನತೆಗೆ ಒಳಗಾಗುವುದಕ್ಕೆ ಕಾರಣಗಳು ಏನೆಂಬುದರತ್ತ ಗಮನ ಹರಿಸಬೇಕಾಗಿದೆ. ದೈನಂದಿನ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವುದರ ಮೂಲಕ ಮಾನಸಿಕ ಖಿನ್ನತೆಯ ಅಪಾಯಗಳಿಂದ ಪಾರಾಗಬಹುದು. ಉತ್ತಮ ಹವ್ಯಾಸಗಳ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸುವಿಕೆ, ದೈನಂದಿನ ವ್ಯಾಯಾಮಕ್ಕೆ ಆದ್ಯತೆ ನೀಡುವಿಕೆ ಸೇರಿದಂತೆ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡು ಖಿನ್ನತೆಯಿಂದ ದೂರ ಉಳಿಯಬಹುದು ಎಂದು ಹೇಳಿದರು.


ಭಯ, ಅನಿರೀಕ್ಷಿತ ಸ್ವಭಾವಗಳ ಮನೋಪ್ರವೃತ್ತಿ ಮತ್ತು ಆಕ್ರಾಮಕ ವರ್ತನೆಗಳ ಗುಣಲಕ್ಷಣಗಳನ್ನು ಕಳಚಿಕೊಳ್ಳಬೇಕು. ಸ್ವಭಾವಗಳ ಒಳಗೇ ಇರುವ ಮಿತಿಗಳನ್ನು ಕಂಡುಕೊಂಡು ಬದಲಾಗುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು. ಈ ಮೂಲಕ ಸ್ಕಿಜೋಫ್ರೇನಿಯಾದಂಥ ಮಾನಸಿಕ ತೊಳಲಾಟದ ಪರಿಸ್ಥಿತಿಯನ್ನು ಎದುರಿಸುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಅಗತ್ಯವೆನ್ನಿಸಿದರೆ ಮನಃಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿ ವ್ಯಕ್ತಿತ್ವವನ್ನು ಮರುರೂಪಿಸಿಕೊಳ್ಳಬೇಕು ಎಂದು ನುಡಿದರು.
ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್, ಕಾರ್ಯಕ್ರಮದ ಆಯೋಜಕರಾದ ಸಿಂಧು ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಛಾಯಾ ಸ್ವಾಗತಿಸಿದರು. ಅನುಶೀ ನಿರೂಪಿಸಿದರು. ಅನುಷಾ ಜಿ ಶೆಟ್ಟಿ ವಂದಿಸಿದರು.

Leave a Comment

error: Content is protected !!