ಪ.ರಾ.ಶಾಸ್ತ್ರಿ ಅಭಿನಂದನೆ: ಆಹ್ವಾನ ಪತ್ರಿಕೆ ಅನಾವರಣ

Suddi Udaya

ಬೆಳ್ತಂಗಡಿ : ಸಮಾಜದ ವಿವಿಧ ಸ್ತರಗಳಲ್ಲಿ ಅಡಗಿರುವ ಸಾಧಕ ಪ್ರತಿಭೆಗಳನ್ನು ಹುಡುಕಿ ಲೋಕಕ್ಕೆ ಪರಿಚಯಿಸುವ ಕಾರ್ಯ ನಡೆಸುತ್ತಿರುವವರು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರು. ಸಹಸ್ರಾರು ಮಂದಿ ಅವರ ಲೇಖನದ ಮೂಲಕ ಹೊಸಜಗತ್ತನ್ನು ನೋಡಿದ್ದಾರೆ. ಕೃಷಿ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದ ಜನರಿಗೂ ಅನುಕೂಲವಾದ ಲೇಖನಗಳನ್ನು ಬರೆದಿದ್ದಾರೆ ಎಂದು ಕಟ್ಟದಬೈಲು ಶಾಲಾ ಮುಖ್ಯಶಿಕ್ಷಕ, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಡ್ವರ್ಡ್ ಡಿ ಸೋಜಾ ಹೇಳಿದರು.

ಅವರು ಜೂ.10ರಂದು ಇಲ್ಲಿನ ಸುವರ್ಣ ಆರ್ಕೇಡ್ ನಲ್ಲಿ ಜು.8 ರಂದು ಬೆಳ್ತಂಗಡಿ ಎಸ್ ಡಿ ಎಂ ಕಲಾಭವನದಲ್ಲಿ ನಡೆಯುವ ಸಾಹಿತಿ ಪ‌. ರಾಮಕೃಷ್ಣ ಶಾಸ್ತ್ರಿ ಅಭಿನಂದನೆ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಶೈಲೇಶ್ ಉಜಿರೆ ರಚಿಸಿದ, ಅಭಿನಂದನ ಕಾರ್ಯಕ್ರಮದ ಲಾಂಛನವನ್ನು ನ್ಯಾಯವಾದಿ ಶಿವಕುಮಾರ್ ಎಸ್.ಎನ್‌. ಅನಾವರಣಗೊಳಿಸಿ, ಸಾಹಿತ್ಯದ ಮೂಲಕ ಚಿರಪರಿಚಿತರಾದ ಶಾಸ್ತ್ರಿಗಳನ್ನು ಅಭಿನಂದಿಸುವುದು ಸಮಾಜ ಅವರ ಕೆಲಸಕ್ಕೆ ನೀಡುವ ಗೌರವದಂತೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಸಂಚಾಲಕ ಸಂಪತ್ ಬಿ. ಸುವರ್ಣ, ಸಾಹಿತಿಯೊಬ್ಬರನ್ನು ಗೌರವಿಸುವುದು ಸಮಾಜದ ಸ್ವಸ್ಥ ಸಮಾಜದ ಪ್ರತಿಬಿಂಬವಾಗಿರುತ್ತದೆ.

ಸಮಾಜದಲ್ಲಿ ಒಳಿತು ಕೆಡುಕುಗಳನ್ನು ಪತ್ರಿಕೆಯ ಮೂಲಕ ತೋರಿಸುತ್ತಾ, ಓರೆಕೋರೆಗಳನ್ನು ಲೇಖನಗಳ ಮೂಲಕ ತಿದ್ದುತ್ತಾ, ಕತೆಗಳ ಮೂಲಕ ಪಾಠ,ಕೃಷಿ ಬರಹದ ಮೂಲಕ ತಿಳಿವಳಿಕೆ, ಜಾಗೃತಿ ಮೂಡಿಸುವ ಕೆಲಸ ಶಾಸ್ತ್ರಿಗಳಿಂದ ನಡೆದಿದೆ. ಎಲ್ಲರೂ ಒಟ್ಟಾಗಿ ಅವರ ಅಭಿನಂದನ ಕಾರ್ಯಕ್ರಮ ವನ್ನು ಚಂದಗಾಣಿಸಬೇಕು ಎಂದರು. ಕಲಾವಿದ, ಸಂಘಟಕ ಎನ್.ಅಶೋಕ ಭಟ್ ಉಜಿರೆ ನಿರ್ವಹಿಸಿದರು. ಅಭಿನಂದನ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನ ಸಭೆ ನಡೆಯಿತು. ಪ್ರಾಚಾರ್ಯ ಡಾ.ಎನ್.ಎಂ.ಜೋಸೆಫ್, ಉದ್ಯಮಿಸೂರ್ಯ ನಾರಾಯಣ ಭಟ್ ಮಚ್ಚಿನ, ಶಿಕ್ಷಕ ರಾಮಕೃಷ್ಣ ಭಟ್ ಬಳಂಜ,‌ ಮಾಜಿ ಸೈನಿಕ ಕಾಂಚೋಡು ಗೋಪಾಲಕೃಷ್ಣ ಭಟ್, ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಬೆಳಾಲು, ಪ್ರಾಧ್ಯಾಪಕ ಡಾ.ಭಾಸ್ಕರ ಹೆಗಡೆ, ಧರ್ಮಸ್ಥಳ ಯೋಜನೆಯ ನಿವೃತ್ತ ಅಧಿಕಾರಿ ಗಣೇಶ ಭಟ್ ಕುತ್ರೊಟ್ಟು, ನಿವೃತ್ತ ಪ್ರಾಚಾರ್ಯ. ಪ್ರೊ.ಗಣಪತಿ ಭಟ್ ಕುಳಮರ್ವ, ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎನ್.ಜಯಶಂಕರ ಶರ್ಮ, ಲೇಖಕ, ಶಿಕ್ಷಕ ಅರವಿಂದ ಚೊಕ್ಕಾಡಿ, ನಿವೃತ್ತ ಬ್ಯಾಂಕ್ ಉದ್ಯೋಗಿ ತ್ರಿವಿಕ್ರಮ ಹೆಬ್ಬಾರ್, ನ್ಯಾಯವಾದಿ ಸುದರ್ಶನ ರಾವ್ ಗಜಂತೋಡಿ, ತಾ.ಪಂ. ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ಉಪಸ್ಥಿತರಿದ್ದರು.

Leave a Comment

error: Content is protected !!