25.5 C
ಪುತ್ತೂರು, ಬೆಳ್ತಂಗಡಿ
April 24, 2026
ತಾಲೂಕು ಸುದ್ದಿವರದಿ

ದೀಪದ ಬೆಳಕಿನಲ್ಲಿ ಅರಳಿದ ಯಕ್ಷಗಾನ ಸೌಂದರ್ಯ

ಯಕ್ಷಗಾನ ಕಲೆ ಪ್ರಮುಖ ಸಾಂಪ್ರದಾಯಿಕ ನೃತ್ಯ ನಾಟಕವಾಗಿದೆ. ನೃತ್ಯ, ಸಂಗೀತ, ವಿಸ್ತಾರವಾದ ವೇಷಭೂಷಣಗಳು, ಮುಖವರ್ಣಿಕೆ, ಮಾತಿನ ಸಂಯೋಜನೆಯೊಂದಿಗೆ ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಹೇಳುತ್ತದೆ. ಎಲ್ಲಾ ಅಂಗದಲ್ಲಿ ಉತ್ತಮವಾದ ಪ್ರಸ್ತುತಿ ಆದರೆ ಯಕ್ಷಗಾನ ಪ್ರದರ್ಶನವು ಹೆಚ್ಚು ಜನಾಕರ್ಷಣೀಯವಾಗಿರುತ್ತದೆ. ದಿನಾಂಕ-14-06-2025 ರಂದು
ಬೆಂಗಳೂರಿನ ಮಾಗಡಿಯ ಇನ್ ಫನೆಟ್ ಸೋಲ್ ನಲ್ಲಿ ಥಿಯೇಟರ್ ಯಕ್ಷ ಉಡುಪಿ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ-ನರಕಾಸುರ ಮೋಕ್ಷ-ಗರುಡ ಗರ್ವಭಂಗ ಎಂಬ ಸರ್ವಾಂಗ ಸುಂದರವಾದ ಕನ್ನಡ ಯಕ್ಷಗಾನ ಪ್ರದರ್ಶನ ನೋಡುಗರನ್ನು ಸೆಳೆಯಿತು.
ನ್ಯೂಯಾರ್ಕ್ ಮೂಲದ ರಂಗ ಕಲಾವಿದರಿಗೆ ತರಬೇತಿಯ ಭಾಗವಾಗಿ ಈ ಪ್ರಸಂಗವನ್ನು ದೀವಟಿಗೆ ಬೆಳಕಿನಲ್ಲಿ ಪ್ರದರ್ಶಿಸಲಾಯಿತು.

ಥಿಯೇಟರ್ ಯಕ್ಷ ಇದರ ಪೃಥ್ವಿರಾಜ್ ಕವತ್ತಾರು ಅವರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರದರ್ಶನವನ್ನು ಕಲಾವಿದರಾದ ಡಾ. ಅಮಾಂಡ ಕಾಪ್, ಕೀರ್ತನಾ ಕುಮಾರ್ ಮತ್ತು ಕೋನಾರ್ಕ್ ರೆಡ್ಡಿ ಸಂಯೋಜಿಸಿದ್ದರು.

ನ್ಯೂಯಾರ್ಕ್ ನಲ್ಲಿರುವ ರಂಗಭೂಮಿಯ ಕಲಾವಿದರ ಸಂಸ್ಥೆಯ ಭಾರತೀಯ ನಾಟ್ಯ ಶಾಸ್ತ್ರದ ಅಧ್ಯಯನ ನಿರತ 30 ಮಂದಿ ಅಮೇರಿಕನ್ ಕಲಾವಿದರು ಪ್ರದರ್ಶನ ವೀಕ್ಷಿಸಿದರು.

ಪೂರ್ವರಂಗದಲ್ಲಿ ಬರುವ ಕೋಡಂಗಿ, ಬಾಲಗೋಪಾಲ, ಷಣ್ಮುಖ ಸುಬ್ರಾಯ, ಅರ್ಧ ನಾರೀಶ್ವರ, ಮುಖ್ಯ ಸ್ತ್ರೀವೇಷ ಹಾಗೂ ಕೃಷ್ಣ ಒಡ್ಡೋಲಗ, ನರಕಾಸುರ(ಬಣ್ಣ), ನಕ್ರತುಂಡಿ(ಹೆಣ್ಣು ಬಣ್ಣ) ಮತ್ತು ಹನುಮಂತನ ತೆರೆಕ್ಲಾಸ್ ನೊಂದಿಗೆ ಪ್ರಸಂಗದ ಪ್ರಸ್ತುತಿಯಾಯಿತು.

ಭಾಗವತಿಕೆ , ಚಂಡೆ ಮದ್ದಳೆ ಚಕ್ರತಾಳ ವಾದನದ ಧ್ವನಿಯೊಂದಿಗೆ ಆಕರ್ಷಣೀಯ ವೇಷಭೂಷಣ, ಮುಖವರ್ಣಿಕೆ, ವೈವಿಧ್ಯಮಯ ನಾಟ್ಯಗಳಿಂದ ನಿರೂಪಿಸಲ್ಪಟ್ಟ ಕಥಾ ಪ್ರಸ್ತುತಿಯನ್ನು ಬೆರಗುಗಣ್ಣಿಂದ ವೀಕ್ಷಿಸಿ ಕರತಾಡನ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದರು. ಮಾತು ಹಿತಮಿತವಾಗಿ ಇದ್ದ ಕಾರಣ ಆ ಭಾಗವನ್ನು ಪ್ರತಿಯೊಬ್ಬ ಪಾತ್ರಧಾರಿ ಭಾವಾಭಿವ್ಯಕ್ತಿಯ ಮೂಲಕ ತುಂಬಿದರು ಮಾತ್ರವಲ್ಲ ಇದು ಕಥೆಯನ್ನು ಅರಿಯುವಲ್ಲಿ ಭಾಷೆಯು ತೊಡಕಾಗಲಿಲ್ಲ. ರಾತ್ರಿ ಮೂರು ಗಂಟೆವರೆಗೂ ಕುಳಿತಲ್ಲಿಂದ ಕದಲದೇ ಯಕ್ಷಗಾನದ ಕಂಪನ್ನು ಆಸ್ವಾದಿಸಿದರು.

ಐದು ದಶಕದ ಹಿಂದಿನಲ್ಲಿ ಇದ್ದಂತೆ ದೊಡ್ಡ ಆಲದ ಮರದ ಕೆಳಗೆ ಮೇಲುಹೊದಿಕೆ ಮಾತ್ರ ಇದ್ದ ರಂಗಸ್ಥಳ, ಎರಡೇ ಧ್ವನಿವರ್ದಕ(ಮೈಕ್ರೋ ಪೋನ್), ದೀವಟಿಗೆಯ ಬೆಳಕಿನಲ್ಲಿ ಕಥಾನಕ ಪ್ರಸ್ತುತಿಯಾಯಿತು.

ನಿಧಾನಗತಿಯ ನಡೆಯ ಪೂರ್ವರಂಗದ ಪ್ರಸ್ತುತಿ, ಪಾತ್ರಗಳು ರಂಗಕ್ಕೆ ಬರುವ ಮತ್ತು ನಿರ್ಗಮಿಸುವ ನಡೆಗಳಲ್ಲಿ ವೈವಿಧ್ಯತೆ , ಪ್ರತಿ ಕಲಾವಿದರು ಪಾತ್ರದ ಭಾವವನ್ನು ಅರಿತು ಜೀವ ತುಂಬಿದ ಕಾರಣ ಪ್ರದರ್ಶನ ಉತ್ಕೃಷ್ಟ ಮಟ್ಟ ತಲುಪಿತು. ಪೂರ್ವರಂಗದ ಪಾತ್ರಗಳು ಸೇರಿದಂತೆ ಜೀವಂತಿಕೆಯಿಂದ ಕೂಡಿದ ಪ್ರಸಂಗದ ಪಾತ್ರಗಳು ರಂಗವನ್ನು ಕಳೆಗಟ್ಟಿಸಿತು. . ಹಿಮ್ಮೇಳ ಮುಮ್ಮೇಳದ ಸಾಂಗತ್ಯವೂ ಕಥೆ ಸರಾಗವಾಗಿ ಮುಂದುವರಿಯಲು ಸಹಕಾರಿಯಾಯಿತು. ತೆರೆ ಹಿಡಿಯುವವರ ಪಾತ್ರವೂ ಯಶಸ್ವಿ ನಿರ್ವಹಣೆಗೆ ಇನ್ನೊಂದು ಕಾರಣ. ಯಕ್ಷಗಾನದಲ್ಲಿ ತೆರೆಯೂ ಒಂದು ಪಾತ್ರವೇ . ತೆರೆ ಹಿಡಿಯುವವರು ಪಾತ್ರಧಾರಿಗಳೇ ಆಗಿದ್ದರೆ ಚೆನ್ನ. ಸ್ವತಃ ಪೃಥ್ವಿೀರಾಜ ಕವತ್ತಾರು ಮತ್ತು ಶಿವರಾಮ ಪಂಜ ಅವರು ತೆರೆ ಹಿಡಿದು, ಹಿನ್ನೆಲೆಯ ಸಹಾಯಕರಾಗಿ ಸಹಕರಿಸಿದ್ದು ಗಮನಾರ್ಹ.

ಪ್ರದರ್ಶನದ ಬಳಿಕ ಅಮೇರಿಕನ್ ಕಲಾವಿದರು ಆನಂದಬಾಷ್ಪ ಸುರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಕೇವಲ ಪ್ರದರ್ಶನವಾಗದೆ ಮನರಂಜನೆಯೊಂದಿಗೆ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿತ್ತು. ತೆಂಕು ತಿಟ್ಟು ಯಕ್ಷಗಾನದ ಗತಕಾಲದ ವೈಭವವನ್ನು ಸಾಕ್ಷ್ಯಾತ್ಕರಿಸಿದ ಈ ಯಶಸ್ವಿ ಪ್ರದರ್ಶನದ ಹಿಂದಿನ ಶಕ್ತಿ ತಂಡದ ನಿರ್ದೇಶಕ ಪೃಥ್ವಿರಾಜ್ ಕವತ್ತಾರು

ಭಾರತೀಯ ಸಾಂಸ್ಕೃತಿಕ ಕಲಾ ಪ್ರಾಕಾರಗಳಲ್ಲಿ ಯಕ್ಷಗಾನ ಕಲೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಅಲಂಕರಿಸಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನವು ಹಲವು ಮಾರ್ಪಾಡು ಹೊಂದಿದರೂ ತನ್ನ ಮೂಲ ಸತ್ವವನ್ನು ಉಳಿಸಿಕೊಂಡಿದೆ. ಇಂತಹ ಶ್ರೇಷ್ಠ ಕಲೆಯನ್ನು ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರವೂ ಬಹಳಷ್ಟಿದೆ. ಅಂತಹ ಸಂಸ್ಥೆಗಳಲ್ಲಿ ಉಡುಪಿಯ ಥಿಯೇಟರ್ ಯಕ್ಷ ವೂ ಒಂದು. ಸಮಾನ ಮನಸ್ಕರು ಸೇರಿ ರಚಿಸಿದ ಥಿಯೇಟರ್ ಯಕ್ಷ ಉಡುಪಿ ಸಂಸ್ಥೆಯು ಪರಂಪರೆಯೊಂದಿಗೆ ನಾವಿನ್ಯದ ಸೊಗಡಿನೊಂದಿಗೆ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಯೋಜಿಸಿಕೊಂಡು ಬರುತ್ತಿದೆ. ಸಂಸ್ಥೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ ಪೃಥ್ವಿರಾಜ್ ಕವತ್ತಾರು ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನದ ಪ್ರೋತ್ಸಾಹಕರಾಗಿ ಯಕ್ಷಗಾನದ ಆರಾಧಕರಾಗಿ, ಕಲಾವಿದರಾಗಿ, ಸಂಘಟಕರಾಗಿ ಯಕ್ಷಗಾನ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇವರ ಕಲ್ಪನೆಯಲ್ಲಿ ಮೂಡಿ ಬಂದ ಈ ಪ್ರದರ್ಶನದಲ್ಲಿ ಯಕ್ಷಗಾನದ ಸೊಗಸು ಮೂಡಿತ್ತು . ಭಾರತೀಯ ನಾಟ್ಯ ಶಾಸ್ತ್ರದ ಅಧ್ಯಯನ ನಿರತ ಅಮೇರಿಕಾದ ಕಲಾವಿದರಿಗೆ ದೀವಟಿಗೆಯ ಬೆಳಕಿನಲ್ಲಿ ನಡೆದ ಈ ಯಕ್ಷಗಾನದ ಪ್ರಸ್ತುತಿ ಅಧ್ಯಯನಕ್ಕೆ ಪೂರಕವಾಗುವಂತಿತ್ತು.

ಅನುಭವಿ ಕಲಾವಿದರೊಂದಿಗೆ ಯುವ ಕಲಾವಿದರ ಸಮೂಹ ಭಾಗವಹಿಸಿ ಎಲ್ಲಾ ರೀತಿಯ ಸಹಕಾರದ ಭಾವದಿಂದ ತೊಡಗಿಕೊಂಡಿರುವುದು ಸ್ತುತ್ಯರ್ಹವಾದ ವಿಚಾರ. ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ವಿಶ್ವಾಸ್‌ ಕರ್ಬೆಟ್ಟು
ಚೆಂಡೆಮದ್ದಲೆಯಲ್ಲಿ ಸ್ಕಂದಕೊನ್ನಾರ್‌, ಸಮರ್ಥ ಉಡುಪ,ಚಕ್ರತಾಳದಲ್ಲಿ ಶಿವರಾಮ ಪಂಜ ಸಹಕರಿಸಿದರು.
ಮುಮ್ಮೇಳದಲ್ಲಿ ಶಂಭಯ್ಯ ಕಂಜರ್ಪಣೆ, ಶಶಿಕಿರಣ ಕಾವು, ನಾಗೇಶ್ ಆಚಾರ್ಯ ಬೈಲೂರು, ಪವನ್ ದೇವ್, ಸಾತ್ವಿಕ್ ನೆಲ್ಲಿತೀರ್ಥ, ಕಿರಣ್ ಕೊಂಚಾಡಿ, ಅಜಿತ್ ಪುತ್ತಿಗೆ, ಸತೀಶ್ ಎಡಮೊಗೆ, ಪೃಥ್ವೀಶ್ ಪರ್ಕಳ, ಶ್ರೀಶನಾರಾಯಣ ಹೆಗ್ಡೆ, ಅನ್ವೇಶ್ ಬಂಟ್ವಾಳ ಪಾತ್ರ ನಿರ್ವಹಿಸಿದರು. ಅರ್ಜುನ್ ಕೋರ್ಡೆಲ್ ಮತ್ತು ಸಂಗಡಿಗರು ಚೌಕಿ(ಬಣ್ಣದ ಮನೆ) ಯಲ್ಲಿ ಸಹಾಯಕರಾಗಿದ್ದರು. ಅದೇ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯ ಆದರೂ ಪೂರ್ವಭಾವಿಯಾಗಿ ತೊಡಗಿಸಿಕೊಂಡ ಸುನಿಲ್ ಪಲ್ಲಮಜಲು ಅವರ ಸಹಕಾರವೂ ಉಲ್ಲೇಖನೀಯ. .
ಯಕ್ಷಗಾನಂ ಗೆಲ್ಗೆ

✍️ ಮಹೇಶ ಕನ್ಯಾಡಿ ಯಕ್ಷಭಾರತಿ ರಿ. ಕನ್ಯಾಡಿ ಬೆಳ್ತಂಗಡಿ.

Related posts

ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಮಾಜಿ ಶಾಸಕ ವಸಂತ ಬಂಗೇರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹ: ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ರಿಗೆ ದೂರು

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಗೇರುಕಟ್ಟೆ : ಪರಪ್ಪು ಯೂನಿಟ್ ಕೆ.ಎಮ್.ಜೆ ಮತ್ತು ಎಸ್.ವೈ.ಎಸ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಮೇ 1: ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

Suddi Udaya
error: Content is protected !!