ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ವತಿಯಿಂದ ರಸ್ತೆಗೆ ಅಳವಡಿಸಿದ ಗೇಟು ತೆರವು

Suddi Udaya

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ರಕ್ಷಣೆಗಾಗಿ ವ್ಯವಸ್ಥಾಪನಾ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಹಾಕಿದ್ದ ಗೇಟನ್ನು ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ದ.ಕ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಜೂ.13ರಂದು ತೆರವುಗೊಳಿಸಲಾಯಿತು.


ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ 2015 ರಲ್ಲಿ ದೇವಸ್ಥಾನಗಳಿಗೆ ಭದ್ರತೆ ಒದಗಿಸುವಂತೆ ಸುತ್ತೋಲೆ ಹೊರಡಿಸಿತ್ತು.ಈ ಆದೇಶದ ಹಿನ್ನಲೆಯಲ್ಲಿ ಸರಕಾರದಿಂದ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಯಲು ಆಲಯವಾಗಿರುವುದರಿಂದ ದೇವಸ್ಥಾನದಲ್ಲಿ ಹೊರಗೆ ಇರುವ ಗಂಟೆ ಸೇರಿದಂತೆ ಲಕ್ಷಾಂತರ ಬೆಲೆಬಾಳುವ ಸೊತ್ತುಗಳ ರಕ್ಷಣೆ, ಹುಂಡಿಯ ರಕ್ಷಣೆ ಸೇರಿದಂತೆ ದೇವಸ್ಥಾನದ ಸಮಗ್ರ ಹಿತದೃಷ್ಟಿಯಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಚಿಂತನೆ ನಡೆಸಿ ದೇವಸ್ಥಾನದ ಹಿಂಭಾಗದಲ್ಲಿ ಕೊಕ್ಕಡ ಗ್ರಾಮದ ಸ.ನಂ 167/1ರಲ್ಲಿ ಅನ್ನಛತ್ರದ ಬಳಿ ರಸ್ತೆಗೆ ಕಳೆದ ವರ್ಷ ಎ.24ರಂದು ಗೇಟು ಹಾಕಿ ಭದ್ರತೆ ಮಾಡಿದ್ದರು. ದೇವಸ್ಥಾನದ ಎದುರು ಭಾಗದಿಂದ ರಸ್ತೆ ಇರುವುದರಿಂದ ಸಮಿತಿ ಈ ತೀರ್ಮಾನವನ್ನು ತೆಗೆದುಕೊಂಡಿತ್ತು.


ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ಶ್ರೀ ಕೃಷ್ಣ ಭಟ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ದ.ಕ ಜಿಲ್ಲಾಧಿಕಾರಿಗಳು ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿ, ಗೇಟು ಹಾಕಿರುವುದರಿಂದ ಸಾರ್ವಜನಿಕರಿಗೆ ಆಗಿರುವ ಸಮಸ್ಯೆ ಬಗ್ಗೆ ತಿಳಿಸಿದ್ದರು.
ಅರ್ಜಿಯ ಪರಿಶೀಲನೆ ನಡೆಸಿದ ದ.ಕ ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ತಹಶೀಲ್ದಾರ್‌ರಿಗೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಸುರೇಶ್ ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರು ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

Leave a Comment

error: Content is protected !!