ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ: ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ, ಕೆವಿಜಿ ದಂತ ಮಹಾ ವಿದ್ಯಾಲಯ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಉಜಿರೆ ಹಳೆಪೇಟೆ ಬದುರುಲ್ ಹುದಾ ಸೆಕೆಂಡರಿ ಮದರಸ ಸಭಾಂಗಣದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಜು.16 ರಂದು ನಡೆಯಿತು.

ಜಮಾಅತ್ ಕೇಂದ್ರ ಕಮಿಟಿ ಕಾರ್ಯದರ್ಶಿ ಬಿ. ಮುಹಮ್ಮದ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಮಸೀದಿ ಖತೀಬ್ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ದುಃಆ ಕಾರ್ಯಕ್ರಮ ನೆರವೇರಿಸಿದರು. ಎಸ್‌ಎಮ್‌ಎ ರಾಜ್ಯಾಧ್ಯಕ್ಷ ಹಾಜಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1400 ವರ್ಷಗಳ ಹಿಂದೆಯೇ ಹಝ್ರತ್ ಪೈಗಂಬರರು ದಿನದಲ್ಲಿ ಐದು ಬಾರಿ ಬಾಯಿ ಸ್ವಚ್ಛಗೊಳಿಸಿಕೊಳ್ಳಲು ಹೇಳಿದ ವಚನವನ್ನು ಉದ್ಧರಿಸಿ ಇಂದಿನ ದಂತ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಕೇಂದ್ರ ಕಮಿಟಿ ಜೊತೆ ಕಾರ್ಯದರ್ಶಿ ಹನೀಫ್ ಟಿ.ಎಚ್, ಕಮಿಟಿಯ ಸದಸ್ಯ ಅಬೂಬಕ್ಕರ್ ಸುಪ್ರೀಂ ಶುಭಕೋರಿದರು.


ಕೆವಿಜಿ ದಂತ ಮಹಾ ವಿದ್ಯಾಲಯದ ವಿಭಾಗ ಮುಖ್ಯಸ್ಥ ಡಾ.ದಯಾಕರ್ ಎಂ. ಎಂ., ಅಲ್-ಅಮೀನ್ ಯೆಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಶಾಕೀರ್ ಹಾಗೂ ಪದಾಧಿಕಾರಿಗಳು ಮತ್ತು ಸಮಾಜ ಸೇವಕ ಸುಲೈಮಾನ್ ಬೆಳಾಲು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಮಾರು ನೂರರಷ್ಟು ಜನ ದಂತದ ವಿವಿಧ ಬಗೆಯ ಉಚಿತ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, 35 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಆಸ್ಪತ್ರೆಗೆ ಆಯ್ಕೆ ಮಾಡಲಾಯಿತು. ಅವರಿಗೆ ಉಚಿತ ಬಸ್ಸು ವ್ಯವಸ್ಥೆ ಕಲ್ಲಿಸುವುದಾಗಿ ಪ್ರಕಟಿಸಲಾಯಿತು.

ಶಿಬಿರ ಸಂಯೋಜಿಸಿದ ಡಾ. ದಯಾಕರ್ ಎಂ.ಎಂ, ಮತ್ತು ಕೆವಿಜಿ ದಂತ ಮಹಾ ವಿದ್ಯಾಲಯದ ಪ್ರೊಫೆಸರ್ ಡಾ. ಅನಿತಾ ದಯಾಕರ್ ಅವರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.

ಅಲ್ ಅಮೀನ್ ಯೆಂಗ್-ಮೆನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಫಝಲ್ ಸ್ವಾಗತಿಸಿ ಧನ್ಯವಾದವಿತ್ತರು.

Leave a Comment

error: Content is protected !!