ಪ.ಜಾತಿ-ಪ.ಪಂಗಡದವರ ಹಿತರಕ್ಷಣಾ ಸಭೆ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮಗು ಸಾವು: ಸುಮೋಟೋ ಕೇಸು ದಾಖಲಿಸಲು ಆಗ್ರಹ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತರಕ್ಷಣಾ ಸಭೆಯು ಅ.9ರಂದು ತಹಶೀಲ್ದಾರ್ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನ ಸೌಧ ಕಚೇರಿ ಸಭಾಂಗಣದಲ್ಲಿ ಜರುಗಿತು.

ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ ಮನ್ನಾ ಜಾಗ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಗಿದ್ದು, ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಅದು 26 ಎಕರೆ ಮಾತ್ರ ಇದೆ. ಆದರೆ ಕೊಯ್ಯೂರು ಒಂದೇ ಗ್ರಾಮದಲ್ಲಿ 45 ಎಕ್ರೆ ಡಿ.ಸಿ ಮನ್ನಾ ಜಾಗ ಇದೆ. ತಾಲೂಕಿನಲ್ಲಿ ಎಲ್ಲಾ ಗ್ರಾಮಗಳಲ್ಲಿರುವ ಡಿ.ಸಿ ಮನ್ನಾ ಜಾಗ ಗುರುತಿಸಬೇಕು, ಡಿಸಿ ಮನ್ನಾ ಜಾಗ ಮಂಜೂರುಗೊಳಿಸಲು 275 ಮಂದಿ ಅರ್ಜಿ ಸಲ್ಲಿಸಿದ್ದರೂ ಇದನ್ನು ಇನ್ನೂ ಮಂಜೂರುಗೊಳಿಸಿಲ್ಲ ಎಂದು ಚಂದು ಎಲ್, ಸಂಜೀವ, ವೆಂಕಣ್ಣ ಕೊಯ್ಯೂರು, ನೇಮಿರಾಜ ಕಿಲ್ಲೂರು ಸಭೆಯ ಗಮನಕ್ಕೆ ತಂದರು. ಆ.21ರಂದು ಈ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ಅದರಲ್ಲಿ ಈ ವಿಷಯ ಚರ್ಚಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ನಗರ ಪಂಚಾಯತದ ಪೌರ ಕಾರ್ಮಿಕರನ್ನು ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ ನಾಯಕರು ಅವರಿಗೆ ಸರಕಾರದಿಂದ ಸರಿಯಾದ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ, ವೈದ್ಯರ ನಿರ್ಲಕ್ಷದಿಂದ ಧಮ೯ಸ್ಥಳ ಗ್ರಾಮದ ಮುಳಿಕ್ಕಾರು ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಮಗು ಮೃತಪಟ್ಟಿದ್ದು ವೈದ್ಯರ ಮೇಲೆ ಸುಮೋಟೋ ಕೇಸು ದಾಖಲಿಸುವಂತೆ ಶೇಖರ ಎಲ್. ಆಗ್ರಹಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಕೆಲ ವೈದ್ಯರು ಖಾಸಗಿ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಇದರ ಬಗ್ಗೆ ಕ್ರಮಕ್ಕೆ ಆಗ್ರಹಿಸಲಾಯಿತು. ವೈದ್ಯರು ತಮ್ಮ ಕರ್ತವ್ಯ ಬಿಟ್ಟು ಇತರ ಅವಧಿಯಲ್ಲಿ ಮಾಡಬಹುದು ಎಂದು ಸರಕಾರದ ಆದೇಶ ಇದೆ ಎಂದು ತಾಲೂಕು

ವೈಧ್ಯಾಧಿಕಾರಿಗಳು ಸ್ವಷ್ಟಪಡಿಸಿದರು. ಪ. ಜಾತಿ ಪಂಗಡದವರಿಗೆ 1986 ರಿಂದ ಪಟ್ಟಣ ಪಂಚಾಯಿತಿಯಿಂದ ಉಚಿತವಾಗಿ ನೀಡುತ್ತಿದ್ದ ನಳ್ಳಿ ನೀರಿಗೆ 2018 ರ ನಂತರ ಒಮ್ಮೆಲೆ 25 ಸಾವಿರಕ್ಕೂ ಮಿಕ್ಕಿ ಬಿಲ್ಲು ಬಂದಿದ್ದು, ಇದನ್ನು ಮನ್ನಾ ಮಾಡುವಂತೆ ಸಂಜೀವ ಅವರು ಆಗ್ರಹಸಿದರು. ಇದರ ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!