
ಪುಂಜಾಲಕಟ್ಟೆ: ಆ.9ರಂದು ನಿಧನರಾದ ಪಿ. ವೆಂಕಟರಮಣ ರವರ ಆತ್ಮಕ್ಕೆ ಶಾಂತಿಯನ್ನು ಕೋರಿ ನುಡಿನಮನ ಕಾರ್ಯಕ್ರಮವು ಆ.10ರಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.
ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸ್ಥಾಪಕ ಪ್ರಾಂಶುಪಾಲರಾಗಿ, ಮುಂದಕ್ಕೆ ಮೈಸೂರು ವಿಭಾಗೀಯ ಸಹನಿರ್ದೇಶಕರಾಗಿ ನಿವೃತ್ತರಾಗಿದ್ದಂತಹ ವೆಂಕಟರಮಣ ಪಿ. ರವರು ಆ.9ರಂದು ದೈವಾಧೀನರಾದರು.
ಮೃತರು ಬೆಳ್ತಂಗಡಿ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಸಹಾಯಕ ಶಿಕ್ಷಣಾಧಿಕಾರಿಯಾಗಿ, ಮುಂದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ, ಸಿಟಿಇ ಪ್ರಾಂಶುಪಾಲರಾಗಿ, ವಿಭಾಗೀಯ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವರು. ಆ ಬಳಿಕವೂ ನವೋದಯ ಮುಂಡಾಜೆಯಲ್ಲಿ ಪ್ರಾಂಶುಪಾಲರಾಗಿ, ಪ್ರಸನ್ನ ಬಿ.ಇಡಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವುದು ಇವರ ಸೇವಾ ತತ್ಪರತೆಗೆ ಹಿಡಿದಿರುವ ಕನ್ನಡಿಯಾಗಿದೆ.
ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ಪ್ರವೀಣ್ ಕುಮಾರ್ ವೆಂಕಟರಮಣ ಪಿ ರವರ ಸೇವಾ ಬದ್ಧತೆ, ಶಿಸ್ತು, ಕಲೆಗೆ ಪ್ರೋತ್ಸಾಹ, ಸಹಕಾರ ಭಾವನೆ, ನುಡಿದಂತೆ ನಡೆದಿರುವ ಕಾರ್ಯವೈಖರಿ ಇತ್ಯಾದಿ ವಿಚಾರಗಳ ಬಗ್ಗೆ ಮೆಲುಕು ಹಾಕುತ್ತಾ ಅವರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಂಸ್ಥೆಯ ಉಪಪ್ರಾಂಶುಪಾಲ ಉದಯಕುಮಾರ್ ಪಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಪ್ರಾಂಶುಪಾಲಉದಯ ಕುಮಾರ್ ಬಿ, ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಶಾಲಾ ಹಳೆವಿದ್ಯಾರ್ಥಿ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಹಶಿಕ್ಷಕ ಹರಿಪ್ರಸಾದ್ ಆರ್ ಸರ್ವರನ್ನು ಬರಮಾಡಿಕೊಂಡರು. ಸಹಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿದರು.