ಕೊಯ್ಯೂರು ಸ.ಪ್ರೌ. ಶಾಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ

Suddi Udaya

ಕೊಯ್ಯೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಆಶ್ರಯದಲ್ಲಿ ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯ್ಕ ಅವರ ಸಂಗ್ರಹದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಅನೇಕ ಐತಿಹಾಸಿಕ ಘಟನೆಗಳ ಛಾಯಾಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.


ಸಮಾರಂಬದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರೊ. ಪ್ರಶಾಂತ ನಾಯ್ಕ ಅವರು ಜೀವನವನ್ನೇ ಮುಡಿಪಾಗಿಟ್ಟು ಬ್ರಿಟಿಷ್ ವಸಾಹತುಶಾಹಿಯ ಆಡಳಿತದ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರಿಗೆ ಗೌರವಾರ್ಪಣೆ ಸಲ್ಲಿಸುವುದು ನಮ್ಮ ಕರ್ತವ್ಯ. ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಷ್ಟ್ರದ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಟಿ. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸ್ವಾತಂತ್ರ್ಯ ಅಂದರೆ ಸ್ಟೇಚ್ಛಾಚಾರವಲ್ಲ. ನಮಗೆ ಸಂವಿಧಾನ ನೀಡಿರುವ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ಕಟ್ಟುವ ಕಟ್ಟುವ ಕೆಲಸದಲ್ಲಿ ನೆರವಾಗಬೇಕು, ಎಂದು ಹೇಳಿದರು.

1886 ರಲ್ಲಿ ಇಂಗ್ಲೆಂಡ್ ಮೊದಲ ಭಾರತೀಯ ಕ್ರಿಕೆಟ್ ತಂಡದ ಪ್ರವಾಸ, 1893 ರಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಉಪನ್ಯಾಸ ನೀಡಲು ಅಮೆರಿಕಾದ ಚಿಕಾಗೋ ಕ್ಕೆ ಹೋದ ಸಂದರ್ಭ, 11 ಆಗಸ್ಟ್ 1908ರಂದು ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿರುವ ದೃಶ್ಯ ಹೀಗೆ ಅಪರೂಪದ ಚಿತ್ರಗಳು ನೋಡುಗರ ಗಮನ ಸೆಳೆದವು. ವಿಡಿಯೋ ಸಾಕ್ಷ್ಯಚಿತ್ರಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸ್ಮಾರ್ಟ್ ಫೋನ್ ನಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ದಿವಂಗತ ಡೊಂಬಯ್ಯ ಗೌಡ ಜೇಂಕಿನಡ್ಕ ಇವರ ಸ್ಮರಣಾರ್ಥ ನೂತನ ಧ್ವಜಸ್ಥಂಭದ ಉದ್ಘಾಟನೆಯನ್ನು ಅವರ ಪತ್ನಿ ಗೀತಾ ಅವರು ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಜೇಸಿ ಬೆಳ್ತಂಗಡಿ ಅಧ್ಯಕ್ಷ ಜೇಸಿ ಶಂಕರ್ ರಾವ್ , ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಕುಮಾರ್, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.

ಮೋಹನದಾಸ ಕಾರ್ಯಕ್ರಮ ನಿರೂಪಿಸಿದರು. ಬೇಬಿ ಸ್ವಾಗತಿಸಿದರು. ರಾಮಚಂದ್ರ ದೊಡ್ಮಿನಿ ಅವರು ಭಾರತ ಸ್ವಾತಂತ್ರ್ಯ ಹೋರಾಟದ ಒಂದು ಪಕ್ಷಿನೋಟ ನೀಡಿದರು. ನಿಶ್ಚಿತ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು. ಸುಧಾಕರ ಶೆಟ್ಟಿ ವಂದಿಸಿದರು. .

Leave a Comment

error: Content is protected !!