ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಉಜಿರೆ . ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ರೂ 2೦೦೦ ನೀಡುವ ಸರಕಾರದ ಮಹತ್ವಾಕಾಂಕ್ಷಿ  “ಗೃಹಲಕ್ಷ್ಮಿ” ಯೋಜನೆಗೆ ಆ 3೦ರಂದು ಮೈಸೂರಿನ  ಮಹಾರಾಜಾ ಕಾಲೇಜು ಮೈದಾನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ಸಚಿವರು  ಚಾಲನೆ ನೀಡುವ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ  ಎಲ್ ಇ ಡಿ ಪರದೆ  ಮೇಲೆ ಬಿತ್ತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಜಿರೆ ಪರಿಸರದ ಸಹಸ್ರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.               

ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸರ್ವರನ್ನೂ ಸ್ವಾಗತಿಸಿ, ಸರಕಾರದ ಯೋಜನೆಯ ಕುರಿತು ಪ್ರಸ್ತಾವಿಸಿದರು.  ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್,ಉಪಾಧ್ಯಕ್ಷ ರವಿಕುಮಾರ್ ಬರಮೇಲು ,ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ,ಕಾರ್ಯದರ್ಶಿ,ಸದಸ್ಯರು ಮತ್ತು  ಸಿಬಂದಿ ವರ್ಗ ಉಪಸ್ಥಿತರಿದ್ದರು. ಶ್ರೀ ಶಾರದಾ ಮಂಟಪ ಮಹಿಳಾ  ಫಲಾನುಭವಿಗಳಿಂದ  ತುಂಬಿ ತುಳುಕುತ್ತಿತ್ತು.  ಯೋಜನೆಯ ಉದ್ಘಾಟನಾ ಕಾರ್ಯಕ್ರಮ  ಹಾಗು ಸಚಿವರ ಭಾಷಣವನ್ನು ನೇರ ಪ್ರಸಾರದಲ್ಲಿ ಬಿತ್ತರಿಸಲಾಯಿತು. ಕಾರ್ಯಕ್ರಮದ ಬಳಿಕ ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನೋಂದಾಯಿತ ಫಲಾನುಭವಿಗಳ ಬ್ಯಾಂಕ್ ಖಾತೆಗೆ  ನಗದು ವರ್ಗಾವಣೆಗೊಂಡ ಬಗೆಗೆ  ಅವರವರ ಮೊಬೈಲ್ ಗೆ ಸಂದೇಶ ರವಾನೆಯಾಗಲಿದೆಯೆಂದು  ತಿಳಿಸಲಾಯಿತು. 

Leave a Comment

error: Content is protected !!