ಶಾಸಕರು ತಮ್ಮ ಅಪ್ತರ ಮೂಲಕ ಅಕ್ರಮ ಮರ ಸಾಗಾಟ, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿ ಚುಣಾವಣೆಗೆ ಹಣ ಖರ್ಚು ಮಾಡಿದ್ದಾರೆ: ಮನೋಹರ ಕುಮಾರ್ ಆರೋಪ ; ಬ್ಲಾಕ್ ಕಾಂಗ್ರೆಸ್ ನಿಂದ ಪತ್ರಿಕಾಗೋಷ್ಠಿ

Suddi Udaya

ಬೆಳ್ತಂಗಡಿ: ಸೌಜನ್ಯ ಸಾವಿಗೆ ನ್ಯಾಯ ಕೊಡಿಸಲು ಮೊದಲು ಅದಿವೇಶನದಲ್ಲಿ ಧ್ವನಿ ಎತ್ತಿದವರು ಮಾಜಿ ಶಾಸಕ ವಸಂತ ಬಂಗೇರ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು.ಕಳೆದ ಐದು ವರ್ಷಗಳಲ್ಲಿ ಮೌನವಾಗಿದ್ದ ಶಾಸಕ ಹರೀಶ್ ಪೂಂಜಾರು ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡುವ ನಾಟಕ ಮಾಡಿದ್ದಾರೆ. ನಿಜವಾಗಿ ನ್ಯಾಯ ಸಿಗಲು ಪ್ರಯತ್ನಿಸಿದ್ದರೆ ಸೌಜನ್ಯ ಕೊಲೆ ತೀರ್ಪು ಪ್ರಕಟವಾದ ಬಳಿಕ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಒತ್ತಾಯಿಸಬೇಕಿತ್ತು ಎಂದು ಕಾಂಗ್ರೆಸ್ ವಕ್ತಾರ ಮನೋಹರ್ ಕುಮಾರ್ ಹೇಳಿದರು.

ಅವರು ಸೆ.4ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಾಸಕರು ತಮ್ಮ ಅಪ್ತರ ಮೂಲಕ ಅಕ್ರಮ ಮರ ಸಾಗಾಟ,ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿ ಚುಣಾವಣೆಗೆ ಹಣ ಖರ್ಚುಮಾಡಿದ್ದಾರೆ.ಇವರ ಅಕ್ರಮದಿಂದ ಕೆಲವು ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ ಎಂದರು. ಮುಗೇರಡ್ಕದಲ್ಲಿ ಇವರ ಆಪ್ತರ ಮರಳುಗಾರಿಕೆ ವಿರುದ್ದ ಅವರದೇ ಪಕ್ಷದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ದೂರು ನೀಡಿದ್ದಾರೆ ಎಂದರು.

ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಐದು ಭಾರಿ ಶಾಸಕರಾದ ವಸಂತ ಬಂಗೇರರು ತಾಲೂಕಿಗೆ ನೀಡಿದ ಕೊಡುಗೆ ಜನ ತಿಳಿದಿದ್ದಾರೆ.ರಸ್ತೆ ನಿರ್ಮಾಣ,ಆಸ್ಪತ್ರೆ, ಶಾಲೆಗಳ ನಿರ್ಮಾಣ,ಹಾಸ್ಟೆಲ್ ನಿರ್ಮಾಣ, ಅಕ್ರಮ ಸಕ್ರಮದಲ್ಲಿ ನಿವೇಶನ ಹಂಚಿಕೆಯಲ್ಲಿ ಮಾಜಿ ಶಾಸಕರು ದಾಖಲೆಯ ಕೊಡುಗೆ ನೀಡಿದ್ದಾರೆ. ಬಂಗೇರರು ಮಾಡಿದ ರಸ್ತೆಗೆ ಡಾಂಬರು,ಕಾಂಕ್ರೀಟ್ ಮಾಡಿ 3೦೦೦ ಕೋಟಿ ತಂದಿದ್ದೇನೆ ಎಂದು ಶಾಸಕ ಹರೀಶ್ ಪೂಂಜಾ ಹೆಳುತ್ತಿದ್ದಾರೆ. ಇದರಲ್ಲಿ 15೦೦ ಕೋಟಿ ಬಂಗೇರು ಮಂಜೂರುಗೊಳಿಸಿದ ಅನುದಾನ ಇದೆ. ಜಿ ಪಂ ಮಾಜಿ ಸದಸ್ಯ ಶಾಹುಲ್ ಹಮೀದ್ ಮಾತನಾಡಿ ಬಡ ಕುಟುಂಬದಿಂದ ಬಂದವ ನಾನು ಎಂದು ಹೇಳುತ್ತಾ ಬಂದಿರುವ ಶಾಸಕ ಹರೀಶ್ ಪೂಂಜಾರ ಬೆನಾಮಿ ಆಸ್ತಿ, ಚುಣಾವಣಾ ಖರ್ಚು ನೋಡಿದರೆ ಇವರ ಪರ್ಷಂಟೆಜ್ ಎಷ್ಟು ಎಂದು ತಿಳಿಯುತ್ತದೆ. ಮುಗೆರಡ್ಕ ಏತ ನೀರಾವರಿ ಯೋಜನೆ ಹಣ ಮಾಡುವ ಯೋಜನೆಯಾಗಿದ್ದು ಬೇಸಿಗೆ ಕಾಲದಲ್ಲಿ ಒಂದಿಂಚು ನೀರು ತರಿಸಲು ಸಾದ್ಯವಿಲ್ಲ. ಜನರಲ್ಲಿ ಅನುಕಂಪ ಸೃಷ್ಟಿಸಲು ತಲವಾರು ಪ್ರಕರಣ ನಾಟಕ ಮಾಡಿ ರಾಜ್ಯದಲ್ಲೆ ನಗೆಪಾಟಾಲಾಗಿದ್ದಾರೆ ಎಂದರು.

ವೀರೇಂದ್ರ ಕುಮಾರ್ ಜೈನ್ ಮಾತನಾಡಿ ಧರ್ಮಸ್ಥಳ- ಕಾರ್ಕಳಕ್ಕೆ ಕೆ.ಎಸ್, ಅರ್, ಟಿ ಸಿ ಬಸ್ ಗೆ ನಾವು ವಸಂತ ಬಂಗೇರರಲ್ಲಿ ಮನವಿ ಮಾಡಿದ್ದು ಅದ್ದರಿಂದ ಬಸ್ ಮಂಜೂರಾಗಿದೆ. ಇದನ್ನು ನಾನು ಮಾಡಿಸಿದ್ದು ಎಂದು ಶಾಸಕರು ಹೇಳುತ್ತಾರೆ.ಐದು ವರ್ಷ ಅವಧಿಯಲ್ಲಿ ಇವರದೆ ಸರಕಾರ ಇತ್ತು ಯಾಕೆ ಮಾಡಿಸಲಿಲ್ಲ.ಇವರಿಗೆ ಮಾಡಿಸುವ ಸಾಮರ್ಥ್ಯ ಇದ್ದರೆ ಇನ್ನು 13 ಕಡೆ ಅಗತ್ಯ ಇದೆ ಇದನ್ನು ಮಂಜೂರು ಗೊಳಿಸಲಿ ಎಂದರು.

ಕಾಂಗ್ರೆಸ್ ಮುಖಂಡ ಜಯರಾಮ ಶೆಟ್ಟಿ ವೇಣೂರು ಮಾತನಾಡಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಸಂತ ಬಂಗೇರರು ನಾವು ಸೇರಿ ಅಂದಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿಯಲ್ಲಿ 50 ಲಕ್ಣ ರೂ ಮಂಜೂರು ಮಾಡಿಸಿದ್ದು ನಂತರ ಬಿಜೆಪಿ ಸರಕಾರ ಬಂತು.ಬಳಿಕ 5 ಲಕ್ಷ ಹೆಚ್ಚುವರಿ ಮಂಜೂರು ಮಾಡಿಸಿ ನಾನೆ 55 ಲಕ್ಷ ಮಂಜೂರು ಮಾಡಿಸಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬ್ರಹ್ಮ ಕಳಸದಲ್ಲಿ ಇಂದು 96 ಲಕ್ಷ ಸಾಲ ಇರುವಂತಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕಾಂಗ್ರೆಸ್ ಮುಖಂಡರುಗಳಾದ ಜಯವಿಕ್ರಮ, ನಮಿತಾ ಕೆ, ಸೆಬಾಸ್ಟಿಯನ್‌ಕಳೆಂಜ, ಧರಣೇಂದ್ರ ಕುಮಾರ್, ಅಶೋಕ್ ಜೈನ್, ಸಂತೋಷ್ ಕುಮಾರ್, ಅಯೂಬ್ ಉಪಸ್ಥಿತರಿದ್ದರು.

Leave a Comment

error: Content is protected !!