ಬಿಜೆಪಿಯ ಕೇಂದ್ರ ಸರಕಾರ ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರವನ್ನು ರೂ. 200 ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ಇಳಿಸುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತರ್ಹ: ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

Suddi Udaya

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರ ಗೃಹಬಳಕೆಯ 14ಕೆ. ಜಿ. ಎಲ್. ಪಿ. ಜಿ. ಸಿಲಿಂಡರ್ ದರವನ್ನು ರೂ. 200 ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ. 400 ಇಳಿಸುವ ನಿರ್ಧಾರ ತೆಗೆದುಕೊಂಡಿರುವುದನ್ನು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಸ್ವಾಗತಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಕೇಂದ್ರ ಸರಕಾರ ಉಜ್ವಲ ಯೋಜನೆ ಅಡಿಯಲ್ಲಿ ಇನ್ನೂ ಹೊಸದಾಗಿ 75 ಲಕ್ಷ ಸಂಪರ್ಕ ನೀಡಲಿದೆ. ಇದರಿಂದಾಗಿ 2014ರ ನಂತರ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 10.25 ಕೋಟಿ ಮನೆಗಳಿಗೆ ಉಜ್ವಲ ಗ್ಯಾಸ್ ಸಿಲಿಂಡರ್ ಸಂಪರ್ಕ ತಲುಪಿದಂತೆ ಆಗಲಿದೆ. ಅಲ್ಲದೆ 2014ರ ವೇಳೆಗೆ ಇದ್ದ ಒಟ್ಟು ಎಲ್ ಪಿ ಜಿ ಸಂಪರ್ಕ 14.5 ಕೋಟಿಯಿಂದ 30.39 ಕೋಟಿಗೆ ಏರಿಕೆಯಾಗಿರುವುದು ಪ್ರಧಾನಿಯವರ ಕಳೆದ 9ವರ್ಷಗಳ ಆಡಳಿತ ಅವಧಿಯ ಫಲವಾಗಿದೆ ಇದರ ಜೊತೆಗೆ ಪಿ ಎನ್. ಜಿ ಸಂಪರ್ಕ 24 ಲಕ್ಷದಿಂದ 90.9 ಲಕ್ಷಕ್ಕೆ ಏರಿದೆ. ಇದು ಹೊಗೆರಹಿತ ಮತ್ತು ಪರಿಸರಪೂರಕವಾದ ಕೇಂದ್ರ ಸರಕಾರ ಪ್ರಯತ್ನಕ್ಕೆ ಪೂರಕವಾಗಿದೆ. ಇದು ದೇಶದ ಮಹಿಳೆಯರ ಆರೋಗ್ಯ ಕಾಪಾಡಿದೆ ಮತ್ತು ಸಮಯ ಉಳಿತಾಯ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯು. ಪಿ. ಎ. ಸರಕಾರದ ಅವಧಿಯಲ್ಲಿ ಎಲ್. ಪಿ. ಜಿ. ಗ್ಯಾಸ್ ಸಿಲಿಂಡರ್ ಒಂದರ ಬೆಲೆ ರೂ. 1241ಗೆ ತಲುಪಿದ್ದು ಮಾತ್ರವಲ್ಲ ಜನರ ಅಗತ್ಯಕ್ಕೆ ಬೇಕಾಗುವಷ್ಟು ಸರಬರಾಜು ಮಾಡಲು ಪರದಾಡುವ ಸ್ಥಿತಿಗೆ ತಲುಪಿತ್ತು. ಜನರು ವಾರಗಟ್ಟಲೆ ಸಿಲಿಂಡರಿಗಾಗಿ ಕಾಯಬೇಕಾಗಿತ್ತು. ಕಾಂಗ್ರೆಸ್ 2014 ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಕೇವಲ 6 ಸಿಲಿಂಡರ್ ಮಾತ್ರ ಕೊಡುವ ಭರವಸೆ ನೀಡುವ ದಯನೀಯ ವಾತಾವರಣಕ್ಕೆ ದೇಶವನ್ನು ಕೊಂಡು ಹೋದದ್ದನ್ನು ಜನರು ಇನ್ನೂ ಮರೆತಿಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಅಗಾಧ ಪ್ರಮಾಣದ ಗ್ಯಾಸ್ ಸಂಪರ್ಕದ ವಿಸ್ತರಣೆ ಮಾಡಿದ್ದರೂ ಸರಬರಾಜಿನಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದೆ. ಸಬ್ಸಿಡಿ ರಹಿತ ಎಲ್.ಪಿ.ಜಿ.ಯು ಯು.ಪಿ.ಎ.ಸಮಯಕ್ಕಿಂತ ಈಗ ಶೇ.27 ರಷ್ಟು ಅಗ್ಗವಾಗಿದೆ. ಕೊರೊನ ಕಾಲಘಟ್ಟದಲ್ಲಿ ಮತ್ತು ರಷ್ಯಾ -ಯುಕ್ರೆನ್ ಯುದ್ಧದ ಹೊರತಾಗಿಯೂ ಗ್ಯಾಸ್‌ ಬೆಲೆಯನ್ನು ನಿಯಂತ್ರಣದಲ್ಲಿ ಇಟ್ಟಿದೆ. ಈ ದಿಟ್ಟ ನಿರ್ಧಾರದಿಂದ ದೇಶದ ಕೋಟ್ಯಂತರ ಕುಟುಂಬಗಳಿಗೆ ಪ್ರಯೋಜನ ಸಿಗಲಿದೆ ಎಂದು ತಿಳಿಸಿದ್ದಾರೆ.


ಕಳೆದ ಒಂಭತ್ತುವರೆ ವರ್ಷಗಳಲ್ಲಿ ಕೇಂದ್ರ ಸರಕಾರವು ತಂದಿರುವ ಕಿಸಾನ್‌ ಸಮ್ಮಾನ್‌, ಫಸಲ್‌ ಬೀಮಾ ಯೋಜನೆ, ಉಜ್ವಲಾ, ಜಲಜೀವನ್‌ ಮಿಷನ್‌ ಮತ್ತಿತರ ಹಲವಾರು ಯೋಜನೆಗಳು ದೇಶದ ಬಡವರ ಕಲ್ಯಾಣವನ್ನು ಮಾಡಿದೆ. 2023ರ ನೀತಿ ಆಯೋಗ ಮತ್ತು ವಿಶ್ವ ಸಂಸ್ಥೆಯ ವರದಿಯ ಪ್ರಕಾರ ದಾಖಲೆ ಪ್ರಮಾಣದಲ್ಲಿ ಅಂದರೆ ಸುಮಾರು 13.5ಕೋಟಿ ಜನರು ಬಹು ಆಯಾಮದಲ್ಲಿ ಬಡತನದ ರೇಖೆಯಿಂದ ಹೊರಬಂದಿರುವುದು ಕೇಂದ್ರ ಸರಕಾರ ಜನಪರ ಯೋಜನೆಗಳು ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!