ಬೆಳ್ತಂಗಡಿ: ‘ಹದಿಹರೆಯ ಕೌತುಕದ ಸಮಯ’ ಕೃತಿ ಲೋಕಾರ್ಪಣೆ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸಹಯೋಗದಲ್ಲಿ‌ ಶ್ರೀಮತಿ ಸುಭಾಷಿಣಿಯವರ ಲೇಖನಿಯಿಂದ ಮೂಡಿ ಬಂದ ಹದಿಹರೆಯ ಕೌತುಕದ ಸಮಯ ಕೃತಿ ಲೋಕಾರ್ಪಣೆ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಸೆ. 17ರಂದು ಜೇಸೀ ಭವನ ಬೆಳ್ತಂಗಡಿಯಲ್ಲಿ ನೆರವೇರಿತು.


ಶ್ರೀಮತಿ ನಿಶಾ ಸಂತೋಷ್‌ರವರ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸುವರ್ಣ ಸಂಭ್ರಮದ ಅಧ್ಯಕ್ಷರಾಗಿರುವ ಲ| ಉಮೇಶ್ ಶೆಟ್ಟಿಯವರು ಉದ್ಘಾಟಿಸಿದರು.
ಕವಿ-ಕೃತಿ ಪರಿಚಯವನ್ನು ಕ.ಚು.ಸಾ.ಪ. ಬೆಳ್ತಂಗಡಿ ಘಟಕದ ಕಾರ್ಯದರ್ಶಿಯಾಗಿರುವ ಶ್ರೀಮತಿ ಹೇಮಾವತಿಯವರು ಬಹಳ ಸೊಗಸಾಗಿ ಪ್ರಸ್ತುತ ಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಅ.ಭಾ.ಸಾ.ಪ ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವರವರು ವಹಿಸಿದ್ದರು.  

ಅಭಾಸಾಪ ಬೆಳ್ತಂಗಡಿ ಸಮಿತಿಯ ಸ್ಥಾಪಕಾಧ್ಯಕ್ಷರಾದ ಡಾ|ಶ್ರೀಧರ್ ಭಟ್‌ರವರು ಕೃತಿಯನ್ನು ಬಿಡುಗಡೆಗೊಳಿಸಿ, ಶುಭ ಹಾರೈಸಿ ಮಾತಾನಾಡುತ್ತಾ ಹದಿಹರೆಯದ ಮಕ್ಕಳು ಹಾದಿ ತಪ್ಪದಂತೆ ಅವರನ್ನು ಕುಟುಂಬ ಮತ್ತು ಸಮಾಜದ ನಿಯಂತ್ರಣದೊಳಗೆ ಪ್ರೀತಿಯಿಂದ ಇರಿಸಿಕೊಂಡು ಸಲಹಬೇಕು ಮಾತ್ರವಲ್ಲ ಉತ್ತಮ ಕೃತಿಗಳ ರಚನೆಯಿಂದ, ಕೃತಿಕಾರರು ದೇಹ ನಾಶವಾದರೂ ಅಕ್ಷರಗಳ ಮೂಲಕ ಉಸಿರಾಡುತ್ತಾ ಸಮಾಜಕ್ಕೆ ನಿರಂತರ ಪ್ರೇರಕ ಶಕ್ತಿಯಾಗುವರು ಎಂದರು.


ಲೇಖಕಿ ಶ್ರೀಮತಿ ಸುಭಾಷಿಣಿಯವರು ತಾವು ನಡೆದು ಬಂದ ದಾರಿ ಮತ್ತು ತಮ್ಮ ಯಶಸ್ಸಿನ ಪಯಣದಲ್ಲಿ ಪ್ರೋತ್ಸಾಹಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ಯುವ ಜನತೆಗೆ ಆಶಾದಾಯಕ ಮಾತುಗಳನ್ನಾಡಿದರು.

ಶ್ರೀ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಇವರನ್ನು ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರದೊಂದಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸುವುದರೊಂದಿಗೆ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಅಭಿನಂದನ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಇದರ ನಿರ್ವಹಣೆಯನ್ನು ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯ ಜತೆಕಾರ್ಯದರ್ಶಿ ಶ್ರೀಮತಿ ವಿನುತಾರವರು ನೆರವೇರಿಸಿದರು.

ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ, ಜಿಲ್ಲಾ ಸಮಿತಿಯ ಸದಸ್ಯ |ರವೀಂದ್ರ ಶೆಟ್ಟಿ ಬಳಂಜರವರು ಉಪಸ್ಥಿತರಿದ್ದರು.

ಶ್ರೀಮತಿ ನಯನರವರು ಧನ್ಯವಾದವನ್ನಿತ್ತರು ಹಾಗೂ ಲ| ವಸಂತ ಶೆಟ್ಟಿ ಶ್ರದ್ಧಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!