ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

Suddi Udaya

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಉಜಿರೆ ಶ್ರೀಧ ಮ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘ, ಗ್ರಾಮದ ಎಲ್ಲ ಸಂಘ ಸಂಸ್ಥೆಗಳು ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಮಂಗಳೂರು ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯವರಿಂದ ಉಚಿತ ವೈದ್ಯಕೀಯ ಶಿಬಿರ ಜರಗಿತು.

ಶಿಬಿರವನ್ನು ಪ್ರಗತಿಪರ ಕೃಷಿಕರೂ ಉದ್ಯಮಿಗಳೂ ಆಗಿರುವ ಜಯಾನಂದ ಗೌಡ ಏರ್ದೊಟ್ಟು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ ಮಾತನಾಡಿ ಹಳ್ಳಿ ಪ್ರದೇಶವೊಂದರಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ವೈದ್ಯಕೀಯ ಶಿಬಿರದ ಆಯೋಜನೆ ಶ್ಲಾಘನೀಯ. ಪ್ರಸ್ತುತ ವಿದ್ಯೆ ಯಾವುದಕ್ಕೆ ಉಪಯೋಗವಾಗುತ್ತಿದೆಯೆಂಬುದು ಯಕ್ಷಪ್ರಶ್ನೆ. ವಿದ್ಯೆಯು ಮನುಕುಲದ ಏಳಿಗೆಗೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಉಪಯೋಗಕ್ಕೆ ಬರಬೇಕು ಹಾಗೂ ನಮ್ಮೆಲ್ಲರ ಸಾಮರ್ಥ್ಯ, ಸಂಪತ್ತು ಒಳ್ಳೆಯದಿಕ್ಕೆ ಉಪಯೋಗವಾಗಬೇಕು. ಪರಿಸರ ಸಂರಕ್ಷಣೆ ಇಂದಿನ ಸವಾಲು. ಆರೋಗ್ಯದ ಮೂಲವಾಗಿರುವ ಪರಿಸರದ ಸಂರಕ್ಷಣೆಯತ್ತ ಎಲ್ಲರೂ ಮನಮಾಡಬೇಕೆಂದು ಕರೆನೀಡಿದರು.

ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ ಮಾತನಾಡಿ ಶ್ರೀ.ಧ.ಮಂ ಕಾಲೇಜಿನ ರಾಷ್ಟ್ರೀಯ ಸೇವಾ ಶಿಬಿರವು ಗ್ರಾಮದ ಅಭಿವೃದ್ಧಿಗೆ ಪೂರಕ ಎನ್ನುತ್ತಾ ಅಭಿನಂದನೆಗಳನ್ನು ಸಲ್ಲಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು ಶಿಬಿರಕ್ಕೆ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಕನಿಕ್ಕಿಲ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ಧೆ, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಸಂಚಾಲಕ ಉಮೇಶ್ ಮಂಜೊತ್ತು, ಕಾರ್ಯದರ್ಶಿ ಮಹಮ್ಮದ್ ಶರೀಫ್, ಯೋಜನಾಧಿಕಾರಿ ಪ್ರಕಾಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಹಳೆವಿದ್ಯಾರ್ಥಿ ಕು. ರೇಶ್ಮ ಸ್ವಾಗತಿಸಿ, ಶಿಬಿರಾರ್ಥಿ ಸ್ಫೂರ್ತಿ ವಂದಿಸಿದರು, ಭವಿತಾ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!