ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಧರ್ಮಸ್ಥಳ : ಇಲ್ಲಿನ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಪದ್ಮರಾಜು ಎನ್ ಇವರು ದೀಪ ಪ್ರಜ್ವಲನಗೊಳಿಸಿ, ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಎಲ್ಲಾ ಶಿಕ್ಷಕ ಬಂಧುಗಳು ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಮುಖ್ಯೋಪಾಧ್ಯಾಯರಾದ ಪದ್ಮರಾಜು ಎನ್ ಇವರು ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು ಶ್ರೇಷ್ಠ ಸಾಧನೆಯನ್ನು ಮಾಡಬಹುದು ಎಂದು ಆಶಯ ವ್ಯಕ್ತಪಡಿಸಿದರು. ಅಧ್ಯಾಪಕರಾದ ಜಯರಾಮ ಮಯ್ಯ ಮಾತನಾಡಿ ಕನ್ನಡ ಭಾಷೆಯನ್ನು ಪ್ರೀತಿಸಿ ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಲಿ ಎಂದು ಆಶಿಸಿದರು. ಕನ್ನಡ ಶಿಕ್ಷಕರಾದ ಯುವರಾಜ್ ರವರು ಮಾತನಾಡಿ ಒಂದು ಭಾಷೆ ಅಳಿದರೆ ಆ ಕಾಲಘಟ್ಟದ ಸಂಸ್ಕೃತಿಯು ನಾಶವಾದಂತೆ ಎಂದು ಹೇಳುತ್ತಾ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.

ಸಂಗೀತ ಶಿಕ್ಷಕಿ ಶ್ರೀದೇವಿ ಯವರು ಹಚ್ಚೇವು ಕನ್ನಡದ ದೀಪ ಎಂಬ ಹಾಡನ್ನು ಹಾಡಿ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಹಾಡಿಸಿದರು. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಮೂಡಿ ಬಂದ ರಾಜ್ಯೋತ್ಸವ ಕಾರ್ಯಕ್ರಮ ಸರಕಾರದ ಸುತ್ತೋಲೆಯಂತೆ ಐದು ಹಾಡುಗಳನ್ನು ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಹಾಡಿಸಲಾಯಿತು. ವಿದ್ಯಾರ್ಥಿಗಳಿಂದ ಭಾಷಣ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಮನೋಜ್ನವಾಗಿ ಮೂಡಿ ಬಂದವು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ಪಟ್ಟಿಯನ್ನು ವಿದ್ಯಾರ್ಥಿನಿ ಭಾಗ್ಯ ಎಸ್ ಗೌಡ ಇವರು ವಾಚಿಸಿದರು. ವಿದ್ಯಾರ್ಥಿನಿ ಅಮೃತ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ಪ್ರತಿಕ್ಷ ರವರು ಸ್ವಾಗತಿಸಿ, ವಿದ್ಯಾರ್ಥಿ ಸಂದೇಶ್ ರವರು ಧನ್ಯವಾದವಿತ್ತರು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು ಚಿತ್ರಕಲಾ ಶಿಕ್ಷಕರಾದ ರೂಪೇಶ್ ರವರು ದೀಪಗಳಿಂದ ಆವೃತ್ತವಾದ ಕರ್ನಾಟಕ ರಾಜ್ಯದ ನಕ್ಷೆಯನ್ನು ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಿ ಆಕರ್ಷಕವಾಗಿ ಕಂಗೊಳಿಸುವಂತೆ ರಚಿಸಿದ್ದರು. ಕನ್ನಡ ಶಿಕ್ಷಕರಾದ ಯುವರಾಜ್ ಹಾಗೂ ವಿಕಾಸ್ ಆರಿಗ ರವರು ಕಾರ್ಯಕ್ರಮವನ್ನು ಸಂಘಟಿಸಿದ್ದರು.

Leave a Comment

error: Content is protected !!