ಯಕ್ಷಧ್ರುವ ಪಟ್ಣ ಫೌಂಡೇಶನ್ ಬೆಳ್ತಂಗಡಿ ಘಟಕದ ನೇತೃತ್ವ ಡಿ.2: ಉಜಿರೆ ರಥಬೀದಿಯಲ್ಲಿ ” ಯಕ್ಷ ಸಂಭ್ರಮ-2023″

Suddi Udaya

Updated on:

ಪತ್ರಿಕಾಗೋಷ್ಠಿ

ಬೆಳ್ತಂಗಡಿ : ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ ಇದರ ವತಿಯಿಂದ “ಯಕ್ಷ ಸಂಭ್ರಮ ೨೦೨೩” ಕಾರ್ಯಕ್ರಮವು ವಿವಿಧ ವೇಷಭೂಷಣಗಳ ವೈಭವದ ಮೆರವಣಿಗೆ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಯಕ್ಷಸಂಭ್ರಮ ಪ್ರಶಸ್ತಿ ಪ್ರದಾನ, ವಿಶೇಷ ಖಾದ್ಯಗಳ ಭೋಜನ ಮೊದಲಾದ ವೈವಿಧ್ಯಮ ಕಾರ್ಯಕ್ರಮಗಳೊಂದಿಗೆ ಡಿ.2ರಂದು ಸಂಜೆ 6ರಿಂದ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ರಥಬೀಧಿಯಲ್ಲಿ ಆದ್ದೂರಿಯಾಗಿ ಜರುಗಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಗೌರವ ಸಲಹೆಗಾರರಾದ ಭಜಬಲಿ ಧರ್ಮಸ್ಥಳ ಹಾಗೂ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಹೇಳಿದರು.

ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಘಟಕದ ಗೌರವ ಸಲಹೆಗಾರರಾದ ಭುಜಬಲಿ ಧರ್ಮಸ್ಥಳ ಇವರು ಮಾತನಾಡಿ, ಕಳೆದ ವರ್ಷದಂತೆ ಉಜಿರೆಯಲ್ಲಿ ಈ ವರ್ಷದ ಕಾರ್ಯಕ್ರಮವು ಆದ್ದೂರಿಯಾಗಿ ಜಾತ್ರೆ ರೂಪದಲ್ಲಿ ನಡೆಯಲಿದೆ.

ಪಟ್ಲ ಫೌಂಡೇಶನ್ ವತಿಯಿಂದ ಬಡ ಕುಟುಂಬದ ಯಕ್ಷಗಾನ ಕಲಾವಿದರಿಗೆ ಆನೇಕ ಜನೋಪಯೋಗಿ ಕಾರ್ಯಕ್ರಮಗಳು ನಡೆಯುತ್ತಿದೆ. ಈಗಾಗಲೇ ಫೌಂಡೇಶನ್‌ನಿಂದ ಕಲಾವಿದರಿಗೆ ಮನೆ ಸೇರಿದಂತೆ ವಿವಿಧ ರೀತಿಯಲ್ಲಿ ರೂ.11.50 ಕೋಟಿ ಸಹಾಯವನ್ನು ನೀಡಲಾಗಿದೆ. ಬಡಕುಟುಂಬದ ಯಕ್ಷಗಾನ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ರೂ.5 ಲಕ್ಷನ್ನು ಫೌಂಡೇಶ್‌ನಿಂದ ನೀಡಲಾಗುತ್ತಿದೆ. ಉಳಿದ ಹಣವನ್ನು ಅವರೇ ಭರಿಸಬೇಕು. ಈಗಾಗಲೇ 13 ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಅವರು ಮಾಹಿತಿ ನೀಡಿ, ಪಟ್ಲ ಫೌಂಡೇಶನ್‌ನ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಅವರು ಫೌಂಡೇಶ್‌ನ ಕಾರ್ಯಚಟುವಟಿಕೆಗೆ ಈಗಾಗಲೇ ರೂ.1 ಕೋಟಿಯನ್ನು ನೀಡಿದ್ದಾರೆ. ಫೌಂಡೇಶನ್ ವತಿಯಿಂದ ಬಡಕುಟುಂಬದ ಕಲಾವಿದರಿಗೆ ಮನೆ ನಿರ್ಮಿಸಿಕೊಡುವ ಕಾರ್ಯ ನಡೆಯುತ್ತಿದ್ದು, ವೇಣೂರಿನ ಮನೋಜ್ ಕುಮಾರ್, ದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ ಇವರಿಗೆ ಸಹಾಯ ನೀಡಲಾಗಿದೆ. ಫೌಂಡೇಶನ್ ೧೦೦ ಮಂದಿ ಯಕ್ಷಗಾನ ಕಲಾವಿಧರಿಗೆ ಮನೆ ನಿರ್ಮಿಸಿಕೊಡುವ ಗುರಿಯನ್ನು ಇಟ್ಟುಕೊಂಡಿದ್ದು, ಈಗಾಗಲೇ ೧೩ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ. ಇತರರಿಗೆ ಬೇರೆ, ಬೇರೆ ರೀತಿಯಲ್ಲಿ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಡಿ.೨ರಂದು ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷದ್ರುವ ಪಟ್ಲ ಘಟಕ ಬೆಳ್ತಂಗಡಿ ಇದರ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಿದ್ಯುತ್ ಇಲಾಖೆ ತತ್ವ ಕಾರ್ಯದರ್ಶಿ ಹಿರಿಯಡ್ಕ ರಾಜೇಶ್ ಪ್ರಸಾದ್, ವಿವೇಕಾನಂದ ವಿದ್ಯಾವರ್ತಕ ಸಂಘ, ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್ ಕಾರಂತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಸಾಧನೆಗೈದ ಮೋಹನ್ ಬೈಪಡಿತ್ತಾಯ, ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಕೃಷಿ ಕ್ಷೇತ್ರದ ಸಾಧಕ ಬಿ.ಕೆ ದೇವರಾಜ್ ಅಮೈ ಮಿತ್ತಬಾಗಿಲು ಇವರುಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರರುವ ಲಕ್ಷ್ಮೀ ಗ್ರೂಪ್ಸ್ ಉಜಿರೆ ಇದರ ಮಾಲಕ ಮೋಹನ್ ಕುಮಾರ್, ಭರತ್ ಕುಮಾರ್ ಉಜಿರೆ, ಹಾಗೂ ಉದ್ಯಮಿಗಳಾದ ಶ್ರೀಮತಿ ಅರ್ಚನಾ ರಾಜೇಶ್ ಪೈ ಉಜಿರೆ ಇವರನ್ನು ಗೌರವಿಸಲಾಗುವುದು ಎಂದು ಸುರೇಶ್ ಶೆಟ್ಟಿಯವರು ತಿಳಿಸಿದರು.

ಆಕರ್ಷಕ ಮೆರವಣಿಗೆ – ೧೦ ಮೈಸಾಸುರ ಸಭಾ ಪ್ರವೇಶ
ಸಂಜೆ ಗಂಟೆ ೫ರಿಂದ ಉಜಿರೆ ಓಶಿಯನ್ ಪರ್ಲ್‌ನಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯವರೆಗೆ ೨೪ ಭಜನಾತಂಡಗಳು, ಚೆಂಡೆ, ಬ್ಯಾಂಡ್, ಕೊಂಬು, ಸ್ಯಾಕ್ಸೊಫೋನ್, ಆಕರ್ಷಕ ಸುಡುಮದ್ದು, ವಿವಿಧ ವೇಷ ಭೂಷಣಗಳೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ರಾತ್ರಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರು “ಶ್ರೀ ದೇವಿ ಮಹಾತ್ಮೆ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿಶೇಷ ಆಕರ್ಷಣೆಯಾಗಿ ಬಂಗಾರದ ಕೀರಿಟದಲ್ಲಿ ಶ್ರೀ ದೇವಿಯ ಪ್ರತ್ಯಕ್ಷದ ಸನ್ನಿವೇಶ, ಹತ್ತು ಮೈಸಾಸುರರ ಬಾಲಲೀಲೆಯ ಆಟಗಳೊಂದಿಗೆ ಸಭಾಪ್ರವೇಶ, ಚಂಡ-ಮುಂಡರ ಅಬ್ಬರದ ಪ್ರವೇಶ, ಹಲವು ವಿಶೇಷ ವೈಭವದ ಸನ್ನಿವೇಶಗಳು, ಆಕರ್ಷಣೀಯ ವಿದ್ಯುತ್ ದೀಪಾ ಸಂಯೋಜನೆ, ವಿಶೇಷ ಹೂವಿನ ಅಲಂಕಾರದ ರಂಗಸ್ಥಳ ಇರಲಿದೆ ಎಂದು ಸುರೇಶ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಕಿರಣ್ ಕುಮಾರ್ ಶೆಟ್ಟಿ, ಸಹ ಸಂಚಾಲಕ ತುಕರಾಮ್ ಬಿ, ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ ಉಪಸ್ಥಿತರಿದ್ದರು.

ವಿಶೇಷ ಭೋಜನ ಖಾದ್ಯಗಳ ಸವಿ ರಾತ್ರಿ ೭ ಗಂಟೆಯಿಂದ ವಿಶೇಷ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿದೆ. ಹುಳಿ ಉಪ್ಪಿನಕಾಯಿ, ಅವಲಕ್ಕಿ, ಉಪ್ಪಿಟ್ಟು, ಕಡ್ಲೆ, ಗೋದಿ ಕೇಕ್, ಜಿಲೇಬಿ ರಾಬಡಿ, ಗೊಳಿಬಜೆ, ಅಕ್ಕಿ ಶ್ಯಾವಿಗೆ, ರಸಾಯನ, ಪುಳಿಯೊಗರೆ, ಬಸಳೆ ಪುಂಡಿ, ಸೆಟ್ ದೋಸೆ, ಮೆಣಸಿನ ಗಟ್ಟಿ. ಪಕಾಳಬಾಥ್, ಬೇಳೆ ಹೋಳಿಗೆ, ರಸಾಯನ ಇಡ್ಲಿ ಸಾಂಬಾರು, ಅಂಬಡೆ, ಚಟ್ನಿ, ಮೊಸರು, ಅನ್ನ, ಸಾಂಬಾರ್, ಚಹಾ, ಕಾಫಿ, ಕಷಾಯ, ನೆಲಕಡಲೆ ಸ್ಪೆಷಲ್ ಚರ್‌ಮುರಿ, ಮುಳ್ಳು ಸೌತೆ ಸ್ಪೆಷಲ್ ಸೊಜಿ ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ ಇದೆ ಎಂದು ಸುರೇಶ್ ಶೆಟ್ಟಿ ಹೇಳಿದರು.

Leave a Comment

error: Content is protected !!