ಡಿ.8 ರಿಂದ ಡಿ.12 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

Updated on:

ಬೆಳ್ತಂಗಡಿ: ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಲಕ್ಷ ದೀಪೋತ್ಸವ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಲ್ಲಿ ಡಿ. 8ರಿಂದ 12ರ ವರೆಗೆ ನಡೆಯಲಿದ್ದು, ಲಕ್ಷದೀಪೋತ್ಸವಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದ್ದು, ಭಕ್ತರ ಸ್ವಾಗತಕ್ಕೆ ಸಿದ್ದಗೊಂಡಿದೆ.
ನಗರಾಲಂಕಾರ:
ಲಕ್ಷದೀಪೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ವಿಶೇಷ ನಗರಾಲಂಕಾರದ ಮೆರಗು ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಅಣಿಯ ಸ್ವರೂಪದ ವಿಶೇಷ ವರ್ಣಾಲಂಕಾರ ನೇತ್ರಾವತಿ ಸ್ನಾನಘಟ್ಟ ದಿಂದ ದೇವಸ್ಥಾನದ ವರೆಗೆ ಕಾಣಬಹುದಾಗಿದೆ. ಅದಲ್ಲದೆ ಪಾರಂಪರಿಕ ಶೈಲಿಯಲ್ಲಿ ಪಥಾಕೆ, ನಿಶಾನೆ, ಕೊಡೆ ಸೇರಿದಂತೆ ನಗರಾಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.


ರಾಜ್ಯಮಟ್ಟದ ವಸ್ತುಪ್ರದರ್ಶನ:
ಲಕ್ಷದೀಪೋತ್ಸವದಲ್ಲಿ ಪ್ರಮುಖ ಆಕರ್ಷಣೆ 44ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೌಢಯ ಕ್ರೀಡಾಂಗಣದಲ್ಲಿ ಸಿದ್ಧಗೊಂಡಿದೆ. ಡಿ.8 ನಾಳೆ ಬೆಳಿಗ್ಗೆ ಇದರ ಉದ್ಘಾಟನೆಯನ್ನು ಪುತ್ತೂರು ಎ.ಸಿ ಗಿರೀಶ್ ನಂದನ್ ನೆರವೇರಿಸಲಿದ್ದಾರೆ. ಶಾಲೆಯ 60,300 ಚದರಡಿ ವಿಸ್ತೀರ್ಣದಲ್ಲಿ 335 ಸ್ಟಾಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಪೈಕಿ 171 ಬಗೆಯ ಸ್ಟಾಲ್‌ಗಳಿರಲಿವೆ. 8 ಸರಕಾರಿ ಮಳಿಗೆ, 5 ಬ್ಯಾಂಕ್, 2 ಧಾರ್ಮಿಕ ಮಳಿಗೆ, ಗ್ರಾಮೀಣಾಭಿವೃದ್ಧಿ, ರುಡ್‌ಸೆಟ್, ಸಿರಿ ಉತ್ಪನ್ನ, ವಾಹನ ಪ್ರದರ್ಶನ, ಸಾವಯವ ಕೃಷಿ ಉತ್ಪನ್ನ ಕರಕುಶಲ ವಸ್ತು, ಯಂತ್ರಪರಿಕರ, ಗೃಹೋಪಯೋಗಿ ವಸ್ತುಗಳ ಮಳಿಗೆ ಸಹಿತ ತಿಂಡಿ ತಿನಿಸು ಸೇರಿದಂತೆ ನಾನಾ ಬಗೆಯ ವಸ್ತುಪ್ರದರ್ಶನ ಮಳಿಗೆ ತೆರೆಯಲು ಕೆಲಸ ಕಾರ್ಯಗಳು ಪೂರ್ಣಗೊಂಡಿದೆ.
ದೇವಸ್ಥಾನದ ರಥಬೀದಿ ವಿಶೇಷ ಬಣ್ಣ, ಬಣ್ಣದ ದೀಪಾಲಂಕಾರ, ಪತಾಕೆಗಳಿಂದ ಸಿಂಗಾರಗೊಂಡಿದೆ. ರಸ್ತೆಗಳ ಇಕ್ಕೆಳೆಗಳಲ್ಲಿ ವಿವಿಧ ವಸ್ತುಗಳ ಮಾರಾಟ ಅಂಗಡಿಗಳು ಆರಂಭಗೊಂಡಿದೆ. ಸುಮಾರು 1500 ಅಂಗಡಿಗಳು ಇರಲಿವೆ. 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಈಗಾಗಲೆ ರಾಜ್ಯಾದ ಎಲ್ಲೆಡೆ ಸರಕಾರಿ ಹೆಚ್ಚುವರಿ ಬಸ್ ಸೇವೆ, ಭಕ್ತ ಊಟದ ವ್ಯವಸ್ಥೆ ಆರೋಗ್ಯ ಸೇವೆ ಸಹಿತ ಸ್ವಚ್ಛ ವಿಶೇಷ ಆಧ್ಯತೆ ನೀಡಲಾಗಿದೆ.
ಗುರುಕಿರಣ್ ನೈಟ್:
ಡಿ. 10ರಂದು ರಾತ್ರಿ ಅಮೃತವರ್ಷಿಣಿ ಸಭಾಭದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ರಾತ್ರಿ 7ರಿಂದ 10.30ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಅವರಿಂದ ಗಾನ ನೃತ್ಯ ವೈವಿಧ್ಯ ಗುರುಕಿರಣ್ ನೈಟ್ ಸಂಭ್ರಮ ನಡೆಯಲಿದೆ. ಅನುರಾಧಾ ಭಟ್, ಇಂದು ನಾಗರಾಜ್, ಸಂತೋಷ್ ವೆಂಕಿ ಮೊದಲಾದ ಖ್ಯಾತ ಹಿನ್ನಲೆ ಗಾಯಕರು, ಗಾಯಕಿಯರು ಮತ್ತು ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಡಿ.11 ಸರ್ವಧರ್ಮ ಸಮ್ಮೇಳನ:
ಡಿ.11 ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುವ ಕರ್ಜಗಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಡಿ.೧೨ ನಡೆಯುವ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ| ಎಸ್. ಸೋಮನಾಥ್ ಉದಾಟಿಸುವರು. ಅಧ್ಯಕ್ಷತೆಯನ್ನು ವಿದ್ವಾಂಸರು ಹಾಗೂ ಪ್ರಖ್ಯಾತ ಗಮಕಿಗಳಾದ ಡಾ.ಎ.ವಿ ಪ್ರಸನ್ನ ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಡಿ.8 ಹೊಸಕಟ್ಟೆ ಉತ್ಸವ, ಡಿ.9 ಕರೆಕಟ್ಟೆ ಉತ್ಸವ, ಡಿ.10 ಲಲಿತೋದ್ಯಾನ ಉತ್ಸವ, ಡಿ.11 ಕಂಚಿಮಾರುಕಟ್ಟೆ ಉತ್ಸವ, ಡಿ.12 ಗೌರಿಮಾರುಕಟ್ಟೆ ಉತ್ಸವ, ಡಿ.13 ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

Leave a Comment

error: Content is protected !!