ವೇಣೂರು ದೇವಾಡಿಗರ ಸೇವಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ವೇಣೂರು ವಲಯ ದೇವಾಡಿಗರ ಸೇವಾ ವೇದಿಕೆಯು ಹಮ್ಮಿಕೊಂಡಿರುವ ಸನ್ಮಾನ ಅಭಿನಂದನೆ ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಡಿ.10 ರಂದು ದೇವಾಡಿಗರ ಸಮುದಾಯ ಭವನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಅಶೋಕ್ ಜಿ ಅಂಡಿಂಜೆ ಯವರು ವಹಿಸಿದ್ದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಮಾತಾಡುತ್ತಾ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಲ್ಲಿ ದೇವಾಡಿಗ ಸಮುದಾಯವು ಮಂಗಳವಾದ್ಯಗಳನ್ನು ನುಡಿಸುವುದರೊಂದಿಗೆ ದೇವಸ್ಥಾನಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಹೇಳುತ್ತಾ ಈ ಸಮುದಾಯ ಭವನಕ್ಕೆ ರೂ 5 ಲಕ್ಷ ಶಾಸಕರ ಅನುದಾನದಿಂದ ಒದಗಿಸುವುದರೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ 25 ಲಕ್ಷ ಅನುದಾನವನ್ನು ಈಗಾಗಲೇ ಮಂಜೂರುಗೊಳಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ದೇವಾಡಿಗರ ಸುಧಾರಕ ಸಂಘ ರಿ. ಮೂಡುಬಿದ್ರಿ ಇದರ ಅಧ್ಯಕ್ಷ ಪುರಂದರ ದೇವಾಡಿಗ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಮೂಡಬಿದ್ರಿ ಅಗ್ನಿಶಾಮಕ ದಳದ ನಿವೃತ್ತ ಅಧಿಕಾರಿ ಸತ್ಯ ಪ್ರಕಾಶ್, ವೇದಿಕೆಯ ಮಾಜಿ ಅಧ್ಯಕ್ಷರಾದ ಸುಂದರ ಎಂ ದೇವಾಡಿಗ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಅಶೋಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವೇದಿಕೆ ವತಿಯಿಂದ ಹಿರಿಯ ಕೊಂಬುವಾದಕರಾದ ಜಯ ದೇವಾಡಿಗ ಶಿವ ಕೃಪಾ ಪರಾರಿ ಇವರಿಗೆ ಸನ್ಮಾನವನ್ನು ಮಾಡಲಾಯಿತು. ನೆಟ್ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಣಮ್ಯ ದೇವಾಡಿಗ ರವರನ್ನು ಅಭಿನಂದಿಸಲಾಯಿತು. 2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ಐದು ವಿದ್ಯಾರ್ಥಿಗಳನ್ನು ಜಾತಿ ಮತ ಭೇದವಿಲ್ಲದೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 5 ರಿಂದ ದ್ವಿತೀಯ ಪಿಯುಸಿವರೆಗಿನ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಎಂಟರಿಂದ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವಂತಹ ದೇವಾಡಿಗ ಸಮಾಜದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಸಮಾಜ ಬಾಂಧವರಿಗಾಗಿ ನಡೆದಂತಹ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇತ್ತೀಚಿಗೆ ಅಗಲಿದ ಸಮಾಜದ ಎಲ್ಲಾ ಹಿರಿಯರಿಗೆ ಸಂತಾಪ ಸೂಚಿಸಲಾಯಿತು.


ಶ್ರೀಮತಿ ಶ್ವೇತಾ ಅಶೋಕ್ ಸನ್ಮಾನ ಪತ್ರವನ್ನು, ಶ್ರೀಮತಿ ವನಿತಾ ಮೋಹನ್ ಪ್ರತಿಭಾ ಪುರಸ್ಕಾರ ಪಟ್ಟಿಯನ್ನು, ಶ್ರೀ ಸುರೇಶ್ ದೇವಾಡಿಗ ವಿದ್ಯಾರ್ಥಿ ವೇತನ ಪಟ್ಟಿಯನ್ನು, ಶ್ರೀಮತಿ ಭವ್ಯ ಶ್ರೀಧರ್ ಮತ್ತು ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು.
ಕುಮಾರಿ ವರ್ಷ, ಕುಮಾರಿ ಸ್ಪಂದನ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಾದ ಅಶೋಕ್ ಜಿ ಅಂಡಿಂಜೆ ಸ್ವಾಗತಿಸಿ, ಸುರೇಶ್ ದೇವಾಡಿಗ ಧನ್ಯವಾದ ಗೈದರು, ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!