ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಜಾಗೃತಿ ಸಪ್ತಾಹ ಕಾರ್ಯಕ್ರಮ

Suddi Udaya

ಉಜಿರೆ : ಇಂದು ಪ್ರಪಂಚದಾದ್ಯಂತ ಆಹಾರ ವ್ಯರ್ಥತೆ ಹೆಚ್ಚಾಗುತ್ತಿದೆ. ಇಂದೂ ಸಹ ಆಹಾರ ಇಲ್ಲದೆ ಬಳಲುವವರು ಅನೇಕರಿದ್ದಾರೆ. ಅಂತವರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ಯುವ ಜನತೆ ಇಂತಹ ಜಾಗೃತಿಯ ಕೆಲಸ ಮಾಡಬೇಕಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಎ. ಜಯಕುಮಾರ ಶೆಟ್ಟಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಯೋಜಿಸಿದ ಜಾಗೃತಿ ಸಪ್ತಾಹ ಉದ್ಘಾಟನೆ ಮಾಡಿ ಆಹಾರ ತ್ಯಾಜ್ಯ ಜಾಗೃತಿ ಕುರಿತು ಮಾತನಾಡಿದರು.

ಜಾಗ್ರತೆಯಿಂದ ಇರುವವರಿಗೆ ಭಯ ಎಂಬುದು ಇರುವುದಿಲ್ಲ. ಯಾವಾಗಲೂ ಆತ್ಮವಿಶ್ವಾಸ ಇರಬೇಕು. ನಮ್ಮ ತಪ್ಪನ್ನು ನಾವೇ ಗುರುತಿಸಿಕೊಳ್ಳಬೇಕು. ಅದರೊಂದಿಗೆ ಇಂತಹ ಜಾಗೃತಿ ಕಾರ್ಯಗಳು ಹೆಚ್ಚಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಮಾತನಾಡಿ ಯುವ ಜನತೆ ಸಮಾಜದ ಅನೇಕ ಸಮಸ್ಯೆಗಳಿಗೆ ಓಗೊಟ್ಟು ಜಾಗೃತಿ ಮಾಡುವ ಕಾರ್ಯ ಮಾಡಬೇಕು. ಇದರಿಂದ ಸಮಾಜದೊಂದಿಗೆ ದೇಶದ ಸುಧಾರಣೆ ಸಾಧ್ಯ ಎಂದು ತಿಳಿಸಿದರು.

ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಶುಭಾಶಂಸನೆ ಮಾಡಿದರು. ರಾ.ಸೇ.ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.

ದಿವ್ಯಶ್ರೀ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿ , ಶಶಾಂಕ್ ವಂದಿಸಿದರು.

Leave a Comment

error: Content is protected !!