ಕಕ್ಕಿಂಜೆ ಶ್ರೀ  ಕೃಷ್ಣ ಆಸ್ಪತ್ರೆಯಲ್ಲಿ  ಯೋಗಕ್ಷೇಮ,ವಿಸ್ತೃತ ವಸತಿ ಸಮುಚ್ಚಯ  ಮತ್ತು ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ 

Suddi Udaya

ಕಕ್ಕಿಂಜೆ : ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ  ಸೇವಾ ಯೋಜನೆಯಾದ ಶ್ರೀ ಕೃಷ್ಣ ಯೋಗಕ್ಷೇಮ (ಮನೆಬಾಗಿಲಿಗೆ ವೈದ್ಯಕೀಯ ಸೇವೆ) ಇದರ  ವಿಸ್ತರಣೆ ಮತ್ತು ವಿಸ್ತೃತ ವಸತಿ ಸಮುುಚ್ಚಯ ಹಾಗೂ ಶ್ರೀ ಕೃಷ್ಣ ಯೋಗಕ್ಷೇಮಕ್ಕೆ ನೂತನ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಫೆ 8 ರಂದು  ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು   ಕೆ ಎಂ ಸಿ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞರಾದ ಡಾ. ಎಂ ಎನ್ ಭಟ್ ಉದ್ಘಾಟಿಸಿ  ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಜನರಿಗೆ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದರ ಜೊತೆಗೆ ಮನೆಬಾಗಿಲಿಗೆ ವೈದ್ಯಕೀಯ ಸೇವೆ ಎಂಬ ಅಪೂರ್ವ  ಸೇವಾ ಯೋಜನೆಯನ್ನು ಸುಮಾರು ಎಂಟು ವರ್ಷಗಳ ಹಿಂದೆ ಪ್ರಾರಂಭಿಸಿ ಮುನ್ನಡೆಸುತ್ತಿರುವ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯರ ಸೇವಾ ಕಾರ್ಯವನ್ನು ಶ್ಲಾಘಿಸಿದರು.  ಅವರು ಹೃದಯ ರೋಗ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ಡಾ.ಮುರಳಿಕೃಷ್ಣ ಇರ್ವತ್ರಾಯ ಪ್ರಾಸ್ತಾವಿಕ ಮಾತನಾಡಿ ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯ ಸೌಲಭ್ಯವನ್ನು   ಬೆಳ್ತಂಗಡಿ ತಾಲೂಕಿನಾದ್ಯಂತ ವಿಸ್ತರಿಸಲಾಗಿದೆ ಹಾಗೂ ಆಸ್ಪತ್ರೆಗೆ ಹೋಗಲು ಅಸಾಧ್ಯವಾದ ಹಾಸಿಗೆ ಹಿಡಿದ ವೃದ್ಧರು ಹಾಗೂ  ರೋಗಿಗಳಿಗೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಣೆಗಾರ  ವಸಂತ ಮಂಜಿತ್ತಾಯ ಶುಭಾಶಂಸನೆಗೈದರು.  ಕಾರ್ಯಕ್ರಮದಲ್ಲಿ ಉದ್ಯಮಿಗಳಾದ  ಗಿರೀಶ್ ಕುದ್ರೆಂತಾಯ, ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ ನೂಜಿ , ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನ ಆಡಳಿತ ನಿರ್ದೇಶಕ ನವೀನ್ ಭಟ್ ತಳವಾರ್, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ  ಅಧ್ಯಕ್ಷ  ರಾಘವೇಂದ್ರ ಬೈಪಡಿತ್ತಾಯ,  ಶಂಕರನಾರಾಯಣ ಕೊಡಂಚ, ರಾಜ್ ಪ್ರಸಾದ್ ಪೊಲ್ನಾಯ, ಕರ್ನಾಟಕ ಬ್ಯಾಂಕ್ ನೆರಿಯ ಶಾಖೆ ಪ್ರಬಂಧಕ ಅವಿನಾಶ್,ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್, ಆಸ್ಪತ್ರೆಯ ವೈದ್ಯರುಗಳಾದ ಡಾ.ಅಲ್ಬಿನ್ ಜೋಸೆಫ್,ಡಾ.ಮೌಲ್ಯ,ಡಾ.ಅಖಿಲ್ ರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ  ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯಲ್ಲಿ  ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿದ ಡಾ.ಅಲ್ಬಿನ್ ಜೋಸೆಫ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ವಂದನಾ ಎಂ ಇರ್ವತ್ರಾಯ ಸ್ವಾಗತಿಸಿ ,ಆರಿಶ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿನಯ ಕಿಶೋರ್ ಶೆಟ್ಟಿ ಧನ್ಯವಾದವಿತ್ತರು. ಗಣೇಶ್  ಕಾರ್ಯಕ್ರಮ ನಿರ್ವಹಿಸಿದರು.  

Leave a Comment

error: Content is protected !!