ಪುತ್ತೂರಿನ ಮುರದಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿ: ನ್ಯಾಯತರ್ಪು ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ ಎಂದು ಗುರುತು ಪತ್ತೆ

Suddi Udaya

Updated on:

ಬೆಳ್ತಂಗಡಿ: ಫೆ.15 ರಂದು ಪುತ್ತೂರಿನ ಮುರದಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿಯನ್ನು ನ್ಯಾಯತರ್ಪು ಗ್ರಾಮದ ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ (58 ವರ್ಷ) ಎಂದು ಗುರುತಿಸಲಾಗಿದೆ.

ಫೆ.14ರಂದು ಮಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ರೈಲು, ಮುರ ಸಮೀಪ ಹಳಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿಯಾಗಿದೆ. ತಕ್ಷಣ ರೈಲು ನಿಲ್ಲಿಸಿದ ಲೋಕೋ ಪೈಲೆಟ್, ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲು ನಿಲ್ದಾಣಕ್ಕೆ
ಕರೆ ತಂದಿದ್ದಾರೆ. ರೈಲು ನಿಲ್ದಾಣದಿಂದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಆಂಬ್ಯುಲೆನ್ಸ್ ತಲುಪುವಷ್ಟರಲ್ಲಿ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ಮೃತ ದೇಹ ರೈಲ್ವೇ ಪೊಲೀಸ್ ಅಧಿಕಾರಿಗಳ ಸುಪರ್ದಿಯಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿತ್ತು.
ಇದೀಗ ಮೃತರ ಗುರುತು ಪತ್ತೆಯಾಗಿದ್ದು, ಇವರು ನ್ಯಾಯತರ್ಪು ಗ್ರಾಮದ ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ ಎಂದು ಗೊತ್ತಾಗಿದೆ. ಇವರು ಕೃಷಿಕರಾಗಿದ್ದು ಸ್ವಲ್ಪಮಟ್ಟಿಗೆ ಅನಾರೋಗ್ಯದ ಕಾರಣ ಪುತ್ತೂರು ಆಸ್ಪತ್ರೆಗೆ ಹೋಗಿ ಸ್ನೇಹಿತನಲ್ಲಿ ಮಾತಾನಾಡಿ ಬರುವುದಾಗಿ ನಾಳದಿಂದ ಫೆ.14 ರಂದು ಬಸ್ ಹತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಇವರು ಪುತ್ತೂರಿನ ಮುರಕ್ಕೆ ಯಾಕೆ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿಲ್ಲ.


ಮೃತರು ಪತ್ನಿ ರಾಜೀವಿ ಹಾಗೂ ಇಬ್ಬರು ಪುತ್ರಿಯರಾದ ಭೂಮಿಕಾ, ದೀಕ್ಷಿತ ಮತ್ತು ಸಹೋದರ, ಸಹೋದರಿಯನ್ನು, ಬಂಧು-ಬಳಗವನ್ನು ಅಗಲಿದ್ದಾರೆ. ಸಂಬಂಧಿಕರು ನೀಡಿದ ಮಾಹಿತಿಯಂತೆ ಮಂಗಳೂರು ಜಿಲ್ಲಾ ಆಸ್ಪತೆಯಲ್ಲಿದ್ದ ಮೃತರ ಶವವನ್ನು ಕುಟುಂಬಸ್ಥರು ಗುರುತು ಪತ್ತೆ ಹಚ್ಚಿ ಮೃತರ ಮನೆಗೆ ತರಲಾಯಿತು.
ಈ ವ್ಯಕ್ತಿ ಹಿಂದೆ ನಾಳ ಅಂಚೆ ಕಚೇರಿಯಲ್ಲಿ ತಾತ್ಕಾಲಿಕವಾಗಿ ಸುಮಾರು 5-6 ವರ್ಷ ಗಳ ಕಾಲ ಪೋಸ್ಟ್ ಮಾನ್ ಅಗಿ ಕೆಲಸ ನಿರ್ವಹಿಸುತ್ತಿದ್ದರು.

Leave a Comment

error: Content is protected !!