ಸುದ್ದಿ ಉದಯ ವರದಿಯ ಫಲಸ್ರುತಿ: 13 ಕೋಟಿ ವೆಚ್ಚದ ಸಮಗ್ರ ಕುಡಿಯುವ ನೀರಿನ ಯೋಜನೆ : ರಕ್ಷೀತ್ ಶಿವರಾಂ ಹಾಗೂ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ:ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶಿವರಾಂ

Suddi Udaya

Updated on:

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತದ 11 ವಾರ್ಡ್‌ಗಳಿಗೆ ಸಮಗ್ರ ನೀರು ಪೂರೈಕೆಗಾಗಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಮಂಜೂರುಗೊಂಡ ರೂ.13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಆರು ವರ್ಷಗಳು ಕಳೆದರೂ, ಜನರಿಗೆ ಯಾವುದೇ ಪ್ರಯೋಜನ ದೊರೆಯದಿರುವ ಹಿನ್ನಲೆಯಲ್ಲಿ ಸುದ್ದಿ ಉದಯ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಹಿನ್ನಲೆಯಲ್ಲಿ ಫೆ.16 ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ನ.ಪಂ ಹಿರಿಯ ಸದಸ್ಯ ಜಗದೀಶ್ ಡಿ. ಹಾಗೂ ಅಧಿಕಾರಿಗಳ ತಂಡ ಕಲ್ಲಗುಡ್ಡೆಯ ನದಿ ಬದಿಯ ಜಾಕ್ ವೆಲ್, ಮಾತೃಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳ್ತಂಗಡಿ ನಗರದ 11 ವಾರ್ಡ್‌ನ ಜನರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಗಾಗಿ ಕರ್ನಾಟಕ ಸರಕಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಇವರ ಮೂಲಕ ರೂ.13 ಕೋಟಿ ಅನುದಾನವನ್ನು ಮಂಜೂರುಗೊಳಿಸಿದ್ದರು. ಕಾಮಗಾರಿ ಆರಂಭಗೊಂಡು ಪಂಪುಹೌಸ್, ಮಾತೃಟ್ಯಾಂಕ್, ಸಣ್ಣ ಟ್ಯಾಂಕ್, ಕಬ್ಬಿಣದ ಪೈಪ್‌ಲೈನ್, ಎಲ್ಲಾ ಕಡೆಗಳಿಗೂ ಗೇಟ್‌ವಾಲ್ ಸೇರಿದಂತೆ ಎಲ್ಲಾ ಕಾಮಗಾರಿಗಳು ಪೂರ್ತಿಗೊಂಡ ಬಳಿಕ ಕೆಯುಡಬ್ಲ್ಯೂಎಸ್ ಬೋರ್ಡ್‌ನವರು ಪರೀಕ್ಷಾರ್ಥವಾಗಿ ಮಾತೃ ಟ್ಯಾಂಕ್‌ಗೆ ನೀರು ತುಂಬಿಸಿ ಟೆಸ್ಟ್ ಮಾಡಿ ನೋಡಿದ್ದಾರೆ. ಎಲ್ಲವೂ ಸಮರ್ಪಕವಾಗಿದೆ ಎಂದು ಗೊತ್ತಾದ ಬಳಿಕ ಈ ಯೋಜನೆಯನ್ನು ನಗರ ಪಂಚಾಯತಕ್ಕೆ ಹಸ್ತಾಂತರಿಸಿದ್ದಾರೆ. 7-1-2018ರಂದು ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಬೆಳ್ತಂಗಡಿ ಮಿನಿವಿಧಾನ ಸೌಧ ಉದ್ಘಾಟನೆಗೆ ಬೆಳ್ತಂಗಡಿಗೆ ಬಂದವರು ಬೆಳ್ತಂಗಡಿ ನಗರಕ್ಕೆ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಆಗಿನ ಶಾಸಕರಾಗಿದ್ದ ಕೆ. ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿದ್ದರು. ಇದು ಉದ್ಘಾಟನೆಗೊಂಡು ಐದು ವರ್ಷಗಳು ಪೂರೈಸಿ ಆರು ವರ್ಷಗಳಾಗುತ್ತಾ ಬರುತ್ತಿದೆ. ಇಷ್ಟು ದೊಡ್ಡ ಪ್ರೋಜೆಕ್ಟ್. ಕೋಟ್ಯಾಂತರ ರೂ. ವೆಚ್ಚ,. ಆದರೆ ಇದರ ಮೂಲಕ ಒಂದು ಹನಿ ನೀರು ನಗರದೆ ಜನರಿಗೆ ತಲುಪಿಲ್ಲ ಎಂದು ಸುದ್ದಿ ಉದಯ ಪತ್ರಿಕೆಯಲ್ಲಿ ಈ ವಾರ ವರದಿ ಪ್ರಕಟಿಸಲಾಗಿತ್ತು.
ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ರಕ್ಷಿತ್ ಶಿವರಾಂ ಅವರು ಇಂದು ಬೆಳಿಗ್ಗೆ ಕಲ್ಲಗುಡ್ಡೆಯ ನದಿ ಬದಿಯ ಜಾಕ್ ವೆಲ್, ಮಾತೃಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಖ್ಯ ಮಂತ್ರಿಗಳು ಉದ್ಘಾಟನೆಗೊಳಿಸಿ ಐದು ವರ್ಷ ಕಳೆದರೂ ಜನರಿಗೆ ಒಂದು ಹನಿ ನೀರು ದೊರೆಯದಿರುವುದಕ್ಕೆ ರಕ್ಷಿತ್ ಶಿವರಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಪ.ಪಂ ಮುಖ್ಯಾಧಿಕಾರಿ ರಾಜೇಶ್, ಇಂಜಿನಿಯರ್ ಮಹಾವೀರ ಜೈನ್, ಮುಖ್ಯ ಇಂಜಿನಿಯರ್ ರಕ್ಷಿತ್, ಪ್ರವೀಣ್ ಫೆರ್ನಾಂಡೀಸ್, ಮೆಹಬೂಬ್, ಸತೀಶ್ ಶೆಟ್ಟಿ, ಉಪಸ್ಥಿತರಿದ್ದರು.

Leave a Comment

error: Content is protected !!