ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ‘ಮಹಾಪ್ರಸಾದ’ ಕೈಪಿಡಿ ಬಿಡುಗಡೆ

Suddi Udaya

ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಕೈಪಿಡಿ “ಮಹಾಪ್ರಸಾದ” ಬಿಡುಗಡೆ ಸಮಾರಂಭವು ಜಾತ್ರೆಯ ಮೊದಲ ದಿನದಂದು ಜರಗಿತು.

ಮಹಾಪ್ರಸಾದ ಕೈಪಿಡಿಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯರು ಬಿಡುಗಡೆಗೊಳಿಸಿ ಮಾತನಾಡುತ್ತಾ, ಮಹಾಪ್ರಸಾದ ಕೃತಿ ಸಣ್ಣದಾದರೂ ಪ್ರಸ್ತುತೆಯಲ್ಲಿ ದೊಡ್ಡದು ಮಾತ್ರವಲ್ಲ ಮಹತ್ವದ್ದು. ಇವತ್ತು ಮಾಹಿತಿಯ ಕೊರತೆಯಿಲ್ಲ. ಆದರೆ ಸ್ಪಷ್ಟ ಮಾರ್ಗದರ್ಶನ ನೀಡಬಲ್ಲ ಮಾಹಿತಿಯ ಅಗತ್ಯವಿದೆ. ವ್ಯಾವಹಾರಿಕ ಬದುಕಿನ ಓಟದಲ್ಲಿ ನಮ್ಮ ಪಾರಂಪರಿಕ ಮೌಲ್ಯಗಳಿಗೆ ಧಕ್ಕೆ ಬರಬಾರದು. ಮುಂದಿನ ತಲೆಮಾರಿಗೆ ಆ ಮೌಲ್ಯಗಳು ಸಮರ್ಥವಾಗಿ ದಾಟಿಸುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಕೈಪಿಡಿಯು ಶಾಶ್ವತ ಕೆಲಸವೆಂಬ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದಿನ ದಿವಸಗಳಲ್ಲಿ ಮಾಯ ದೇವಸ್ಥಾನದ ಎಲ್ಲ ಕಾರ್ಯಗಳಿಗೆ ಸರ್ವ ಸಹಕಾರ ನೀಡುವ ಭರವಸೆ ನೀಡಿದರು. ಮಾಯ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವ ಹಾಗೂ ಇತರ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಪೂರೈಕೆ ಆಗಿದ್ದರೆ ಅದಕ್ಕೆ ಕಾರಣರು ಊರವರು ಎನ್ನುತ್ತಾ, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಚ್ ಪದ್ಮ ಗೌಡರು ಊರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಮಾರಂಭದ ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರೆಲ್ಲರು ಉಪಸ್ಥಿತರಿದ್ದರು. ಕೈಪಿಡಿಯ ಸಂಪಾದಕರಾದ ನಾರಾಯಣ ಸುವರ್ಣರು ಸ್ವಾಗತಿಸಿ, ಇನ್ನೋರ್ವ ಸಂಪಾದಕರಾದ ಶೇಖರ ಗೌಡ ಕೊಲ್ಲಿಮಾರು ವಂದಿಸಿದರು. ಪ್ರಧಾನ ಸಂಪಾದಕರಾದ ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!