ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ

Suddi Udaya

ಬೆಂಗಳೂರು: ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವ ಬಗ್ಗೆ ಈಗಾಗಲೇ ಎರಡು ಭಾಷೆಗಳಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಿರುವ ಬಿಹಾರ, ಪಶ್ಚಿಮ ಬಂಗಾಲ ಮತ್ತು ಆಂಧ್ರ ಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ವರದಿ ಪಡೆದು ಕಾನೂನು ಇಲಾಖೆಗೆ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ. ಎಂ. ಫಾರೂಖ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನ ನೀಡುವುದು ನಮ್ಮ ಗಮನದಲ್ಲಿದೆ. ಆದರೆ ನಿಯಮಗಳ ಪಾಲನೆ ಆಗಬೇಕಿದೆ. ಡಾ। ಮೋಹನ್‌ ಆಳ್ವರ ಸಮಿತಿ ನೀಡಿದ ವರದಿ ನಮ್ಮ ಮುಂದಿದೆ. ಆದರೆ ಕಾನೂನು ಇಲಾಖೆಯು ಅನ್ಯ ರಾಜ್ಯಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಬಯಸಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಸಮಿತಿ ಕಳುಹಿಸಲು ಸರಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.

ನಾವು ಈಗಾಗಲೇ ಈ ಮೂರು ರಾಜ್ಯಗಳಿಗೆ ಪತ್ರ ಬರೆದು ದ್ವಿಭಾಷೆ ಅಳವಡಿಕೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದೆವು. ಆದರೆ ಈ ರಾಜ್ಯಗಳಿಂದ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ನಾವೇ ಈಗ ತಂಡ ಕಳುಹಿಸಲು ಮುಂದಾಗಿದ್ದೇವೆ. ನಮ್ಮ ತಂಡ ನೀಡುವ ವರದಿಯನ್ನು ಕಾನೂನು ಇಲಾಖೆಗೆ ಸಲ್ಲಿಸುತ್ತೇವೆ ಎಂದು ಶಿವರಾಜ ತಂಗಡಿ ಭರವಸೆ ನೀಡಿದರು.

ಪ್ರತಾಪಸಿಂಹ ನಾಯಕ್ ಮಾತನಾಡಿ, 20-25 ವರ್ಷಗಳಿಂದ ತುಳುವಿಗೆ ಅಧಿಕೃತ ಸ್ಥಾನಮಾನ ನೀಡುವ ಪ್ರಯತ್ನ ನಡೆಯುತ್ತಿದೆ. ಆದರೆ ಇನ್ನೂ ಸಿಕ್ಕಿಲ್ಲ. ಇದಕ್ಕೆ ಕಾರಣವೇನು ಎಂದು ಸರಕಾರ ತಿಳಿಸಬೇಕು ಎಂದು ಆಗ್ರಹಿಸಿದರು.

ಹರೀಶ್‌ಕುಮಾ‌ರ್ ಮಾತನಾಡಿ, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆಯಬೇಕು ಎಂದು ಆಗ್ರಹಿಸಿದರು. ಭಾರತಿ ಶೆಟ್ಟಿ ಹಾಗೂ ತೇಜಸ್ವಿನಿ ಅವರು ದನಿಗೂಡಿಸಿದರು.

Leave a Comment

error: Content is protected !!