ದ್ವಿತೀಯ ಪಿಯುಸಿ ಪರೀಕ್ಷೆ: ಹೆಚ್ಚುವರಿ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Suddi Udaya

ಬೆಳ್ತಂಗಡಿ: ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಇಂದು ನಡೆದಿದ್ದು, ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಇಲ್ಲದ ಪರದಾಟ ನಡೆಸುತ್ತಿರುವುದು ಬಸ್‌ನಿಲ್ದಾಣಗಳಲ್ಲಿ ಕಂಡು ಬಂದಿದೆ.


ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದರೂ, ಶಿಕ್ಷಣ ಇಲಾಖೆ ಹಾಗೂ ಸರಕಾರ ರೂಪಿಸಿರುವ ನಿಯಮದ ಪ್ರಕಾರ ಅವರಿಗೆ ಅಲ್ಲಿ ಪರೀಕ್ಷೆಗೆ ಅವಕಾಶ ನೀಡದೆ ಬೇರೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ಅನಿವಾರ್ಯತೆ ಇದೆ. ಉಜಿರೆ,ಮುಂಡಾಜೆ,ಕಕ್ಕಿಂಜೆ,ಚಾರ್ಮಾಡಿ,ದಿಡುಪೆ ಮೊದಲಾದ ಕಡೆಗಳ ವಿದ್ಯಾರ್ಥಿಗಳು ಬೆಳ್ತಂಗಡಿ, ಪುಂಜಾಲಕಟ್ಟೆ ಮೊದಲಾದ ಕಾಲೇಜುಗಳಲ್ಲಿ ಪರೀಕ್ಷೆ ಬರೆದರೆ, ಆ ಭಾಗದ ವಿದ್ಯಾರ್ಥಿಗಳು ಈ ಭಾಗದ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಬೇಕು. ಈ ಕಾರಣದಿಂದ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಬಸ್‌ನಿಲ್ದಾಣಗಳಲ್ಲಿ ಕಂಡುಬಂದರು.


ಪರೀಕ್ಷಾ ಕೇಂದ್ರಗಳನ್ನು ಬದಲಿಸಿದ್ದರೂ, ಅಲ್ಲಿಗೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ತಾಲೂಕಿನ ಹೆಚ್ಚಿನ ಕಾಲೇಜುಗಳು ಪೇಟೆ ಪ್ರದೇಶಗಳಿಂದ ಹೊರಭಾಗದಲ್ಲಿರುವ ಕಾರಣ ಹಲವೆಡೆ ಎಕ್ಸ್ ಪ್ರೆಸ್ ಬಸ್ಸುಗಳು ನಿಲುಗಡೆ ನೀಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಾಮೂಲಿ ಸಂಚರಿಸುವ ಲೋಕಲ್ ಬಸ್‌ಗಳೇ ಆಧಾರ .ಇವು ಟ್ರಿಪ್ ಆರಂಭಿಸುವ ಸ್ಥಳದಿಂದಲೇ ತುಂಬಿ ಬರುತ್ತಿದ್ದು ಇವುಗಳನ್ನು ಏರಲು ಜಾಗವಿಲ್ಲದಷ್ಟು ಜನಸಂದಣಿ ಇತ್ತು. ಹೊಸ ಹೊಸ ನಿಯಮಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವ ಇಲಾಖೆ ನಿಯಮಗಳನ್ನು ರೂಪಿಸುವಾಗ ಅದಕ್ಕೆ ಸರಿಯಾದ ಅಗತ್ಯವ್ಯವಸ್ಥೆಗಳ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

Leave a Comment

error: Content is protected !!